ಬೆಂಗಳೂರು: ಬೆಂಗಳೂರಿನ ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚುರುಕಿನಿಂದ ತನಿಖೆ ನಡೆಸುತ್ತಿರುವ ಐಎನ್ಎ ತನಿಖಾಧಿಕಾರಿಗಳು ಭಟ್ಕಳ ಮೂಲದ ಇಬ್ಬರು ಹಾಗೂ ಬೆಂಗಳೂರು ಮೂಲದ ಮೂವರು ಶಂಕಿತ ಉಗ್ರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಧಿಕಾರಿಗಳ ವಶದಲ್ಲಿರುವವರೆಲ್ಲಾ ವಿದ್ಯಾರ್ಥಿಗಳಾಗಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಭಟ್ಕಳದ ಅಂಜುಮನ್ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳಾದ ಸಯ್ಯದ್ ಇಸ್ಮಾಯಿಲ್ ಅಶ್ಫಾಕ್ ಹಾಗೂ ಸದ್ದಾಂ ಹುಸೇನ್ ಬಂಧಿತ ಶಂಕಿತ ಉಗ್ರರು. ಅದೇ ರೀತಿ ಸೈಯದ್ ಇಸ್ಮಾಯಿಲ್, ಅಬ್ದುಲ್ ಸಬ್ರೂರ್, ಅಬ್ದುಲ್ ಅಜೀಜ್ ಅವರನ್ನು ಬೆಂಗಳೂರಿನ ಪುಲಿಕೇಶಿ ನಗರದಿಂದ ಬಂಧಿಸಲಾಗಿದೆ. ಬಂಧಿತರಿಂದ ಮೊಬೈಲ್, ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಇವರೆಲ್ಲಾ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವರೆಂದು ಪೊಲೀಸ್ ವರಿಷ್ಠ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ.
ಪ್ರಾಜೆಕ್ಟ್ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಸದ್ದಾಂ ಹುಸೇನ್ನನ್ನು ಪೊಲೀಸರು ಈ ಮೊದಲೇ ವಶಕ್ಕೆ ಪಡೆದಿದ್ದರು. ಆತ ನೀಡಿದ ಮಾಹಿತಿಯ ಮೇರೆಗೆ ಸೈಯದ್ ಇಸ್ಮಾಯಿಲ್ನನ್ನು ವಶಕ್ಕೆ ಪಡೆದಿದ್ದಾರೆ. ಸ್ಫೋಟದ ಬಗ್ಗೆ ತನಿಖಾಧಿಕಾರಿಗಳ ಎದುರು ವಿದ್ಯಾರ್ಥಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಫೋಟದ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡಿದ್ದ ಸಿಬಿಐ ಅಧಿಕಾರಿಗಳು ರಾಜ್ಯದ ಬೇರೆ ಬೇರೆ ನಗರಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಸ್ಫೋಟಕ್ಕೆ ಸಂಬಂಧಪಟ್ಟ ಹಲವಾರು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನ ಬಾಂಬ್ ಸ್ಫೋಟದಲ್ಲಿ ಸಿಮಿ, ಐಎಂ ಕೈವಾಡ ಇರುವ ಶಂಕೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿತ್ತು.
ಸ್ಫೋಟಕ್ಕೆ ಭಟ್ಕಳದ ಬಾಂಬ್?
ಬಾಂಬ್ ಸ್ಫೋಟಕ್ಕೆ ಭಟ್ಕಳದಿಂದ ಸ್ಫೋಟಕಗಳನ್ನು ತಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಯಾಕೆಂದರೆ ಸ್ಫೋಟ ನಡೆದ ದಿನ ಭಟ್ಕಳಕ್ಕೆ ದೂರವಾಣಿ ಕರೆಗಳು ಹೋಗಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದರು. ಈ ಆಧಾರದಲ್ಲಿ ಜಂಟಿ ಕಾರ್ಯಚರಣೆ ನಡೆಸಿರುವ ಅಧಿಕಾರಿಗಳು ಶಂಕಿತರನ್ನು ಬಂಧಿಸಿದ್ದಾರೆ
