ಮಂಗಳೂರು: ನಾಪತ್ತೆಯಾಗಿದ್ದ ಕ್ರಿಶ್ಚಿಯನ್ ಸಮುದಾಯದ ಯುವತಿ ಬಂಟ ಸಮುದಾಯದ ಯುವಕನನ್ನು ವರಿಸಿದ ಪ್ರಸಂಗ ನಗರದಲ್ಲಿ ಜರಗಿದ್ದು, ಅಂತರ್ಜಾತಿ ವಿವಾಹವಾಗಿರುವುದರಿಂದ ಸಮಾಜದಿಂದ ಬರುವ ಬೆದರಿಕೆ ಗಳಿಂದ ರಕ್ಷಣೆ ಒದಗಿಸುವಂತೆ ಜೋಡಿ ಉಳ್ಳಾಲ ಪೊಲೀಸರ ಮೊರೆ ಹೋಗಿದ್ದಾರೆ. jodi ಮಂಗಳನಗರ ನಿವಾಸಿ ಕಿರಣ್ ರೈ(35) ಮತ್ತು ಕೋಟೆಕಾರು ಮಡ್ಯಾರು ನಿವಾಸಿ ನಮಿತಾ ಪಾಯಸ್(26) ವಿವಾಹವಾದ ಪ್ರೇಮಿಗಳು. ಮಂಗಳೂರಿನಲ್ಲಿ ಉದ್ಯಮ ನಡೆಸುತ್ತಿರುವ ಕಿರಣ್‍ಗೆ, ಪಾನೀರು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ನಮಿತಾ ಜತೆಗೆ ಪ್ರೇಮಾಂಕುರವಾಗಿತ್ತು. ಇಬ್ಬರ ವಿವಾಹಕ್ಕೆ ಮನೆಮಂದಿಯ ವಿರೋಧವಿದ್ದ ಹಿನ್ನೆಲೆಯಲ್ಲಿ ಡಿ. 26ರಂದು ಗೆಳತಿಯ ನಿಶ್ಚಿತಾರ್ಥ ಸಮಾರಂಭಕ್ಕೆ ಹೋಗುವುದಾಗಿ ಹೇಳಿ ತೆರಳಿದ್ದ ನಮಿತಾ ಬಳಿಕ ನಾಪತ್ತೆಯಾಗಿದ್ದಳು. ವಾಪಸ್ಸು ಬರುತ್ತಾಳೆಂಬ ನಿರೀಕ್ಷೆಯಿಂದ ಮನೆಮಂದಿ ಕಾದು ಕುಳಿತು ಜ.1 ರಂದು ಉಳ್ಳಾಲ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಆದರೆ ಜೋಡಿ ಶುಕ್ರವಾರ ಉಳ್ಳಾಲ ಠಾಣೆಗೆ ಹಾಜರಾಗಿ ನಗರದ ಆರ್ಯ ಸಮಾಜದಲ್ಲಿ ಮದುವೆಯಾಗಿರುವ ವಿಚಾರವನ್ನು ತಿಳಿಸಿದ್ದು, ನಮಿತಾ ಸ್ವಇಚ್ಛೆಯಿಂದ ತೆರಳಿರುವುದಾಗಿ ಹೇಳಿಕೆಯನ್ನು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಂಡಿದೆ. ಈ ನಡುವೆ ಅಂತರ್ಜಾತಿ ವಿವಾಹ ಆಗಿರುವುದರಿಂದ ಸಮಾಜದಿಂದ ಬೆದರಿಕೆಗಳು ಬರುವ ಹಿನ್ನೆಲೆಯಲ್ಲಿ ರಕ್ಷಣೆ ನೀಡುವಂತೆಯೂ ಜೋಡಿ ಕೋರಿದ್ದಾರೆ.

By suddi9

Leave a Reply

Your email address will not be published. Required fields are marked *