ಬಂಟ್ವಾಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ತಿರಂಗ ವಾಹನ ಜಾಥಾ ಸಮಿತಿ ಬಂಟ್ವಾಳ ಇದರ ವತಿಯಿಂದ ತಿರಂಗ ವಾಹನ ಜಾಥ ಕಲ್ಲಡ್ಕದಿಂದ ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ನಡೆಯಿತು.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮೈದಾನದಲ್ಲಿ ಆರ್ಎಸ್ಎಸ್ ಪ್ರಮುಖರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ತಿರಂಗ ಧ್ವಜ ಹಸ್ತಾಂತರಿಸುವ ಮೂಲಕ ಜಾಥಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ‘ಸಾವಿರ ವರ್ಷಗಳ ಬ್ರಿಟಿಷರ ಆಡಳಿತದಿಂದ ಮುಕ್ತಿ ದೊರೆತ ಪವಿತ್ರ ಕ್ಷಣವನ್ನು ನಾವು ಸ್ಮರಿಸುತ್ತಿದ್ದೇವೆ. ದೇಶ ಅಖಂಡವಾಗಿ ಉಳಿಯಬೇಕು ಎಂಬುದು ನಮ್ಮ ಕನಸಾಗಿತ್ತಾದರೂ ಅದು ಇನ್ನೂ ಸಾಧ್ಯವಾಗಲಿಲ್ಲ ಎಂಬ ಬೇಸರವೂ ನಮ್ಮಲ್ಲಿದೆ ಎಂದರು.
ರಾಷ್ಟ್ರಧ್ವಜ ಕೇವಲ ಬಟ್ಟೆಯ ತುಂಡಲ್ಲ. ಅದು ನಮ್ಮ ದೇಶದ ಹೆಗ್ಗುರುತು. ತಿರಂಗ ಧ್ವಜ ಸದಾ ಎತ್ತರದಲ್ಲಿ ಹಾರಾಡಬೇಕು. ದೇಶದ ಏಕತೆ ಮತ್ತು ಅಖಂಡತೆಗಾಗಿ ನಾವೆಲ್ಲರೂ ಒಂದಾಗಬೇಕು ಎಂದು ಹೇಳಿದರು.
ಜೆನ್ ಝೀ ಪೀಳಿಗೆಯೇ ದೇಶದ ಮುಂದಿನ ಪ್ರಜೆಗಳು ಹಾಗೂ ಭವಿಷ್ಯ ಯುವ ಜನಾಂಗ ಶಾರ್ಟ್ಕಟ್ನ ಯೋಚನೆ ಬಿಟ್ಟು ದೇಶಕ್ಕಾಗಿ ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು ದೇಶದ ಹಿತಕ್ಕಾಗಿ ಹೋರಾಟ, ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು. ಆದರೆ ಯಾವುದೇ ಕಾರಣಕ್ಕೂ ಅದು ಅಡ್ಡದಾರಿ ಹಿಡಿಯಬಾರದು ಎಂದು ಅವರು ಹೇಳಿದರು.
ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ,ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಪ್ರ.ಕಾರ್ಯದರ್ಶಿಗಳಾದ ಶಿವಪ್ರಸಾದ್ ಶೆಟ್ಟಿ, ಸುದರ್ಶನ ಬಜ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕಡಂಜಿ ,ಜಿಲ್ಲಾ ಕಾರ್ಯದರ್ಶಿಗಳಾದ ದಿನೇಶ್ ಅಮ್ಟೂರು, ದೇವಪ್ಪ ಪೂಜಾರಿ,ಯುವ ಮೋರ್ಛಾ ಅಧ್ಯಕ್ಷ ದಿನೇಶ್ ಶೆಟ್ಟಿ ದಂಬೆದಾರ್,ಪಕ್ಷದ ಪ್ರಮುಖರಾದ ರಾಮದಾಸ್ ಬಂಟ್ವಾಳ, ಸಂಪತ್ ಕೋಟ್ಯಾನ್ ಕಡೇಶಿವಾಲಯ, ಹರಿಪ್ರಸಾದ್ ಬಂಟ್ವಾಳ, ಹರೀಶ್ ಶೆಟ್ಟಿ ಪಡು, ವಿಕಾಸ್ ಪುತ್ತೂರು, ಸಂದೇಶ್ ಶೆಟ್ಟಿ, ಶ್ರೀಧರ್ ಶೆಟ್ಟಿ ಪುಳಿಂಚ, ಮಾಧವ ಮಾವೆ, ಕಮಲಾಕ್ಷಿ ಪೂಜಾರಿ, ಲಖಿತಾ ಆರ್. ಶೆಟ್ಟಿ, ದಿನೇಶ್ ಭಂಡಾರಿ, ಮೋನಪ್ಪ ದೇವಸ್ಯ, ವಸಂತ ಅಣ್ಣಳಿಕೆ, ರವೀಶ್ ಶೆಟ್ಟಿ, ಶಿವರಾಮ್ ಮತ್ತಿತರರಿದ್ದರು.
ಕಲ್ಲಡ್ಕ ದಿಂದ ತಿರಂಗಯಾತ್ರೆಯ ವಾಹನ ಜಾಥ ಬಿ.ಸಿ.ರೋಡಿನ ಅಜ್ಜುಬೆಟ್ಟು ಕ್ರಾಸ್ ನಲ್ಲಿ ತಿರುವುಪಡೆದು ಬಳಿಕ ಸ್ಪರ್ಶಾ ಕಲಾಮಂದಿರದಲ್ಲಿ ಸಂಪನ್ನಗೊಂಡಿತು. ಎಬಿವಿಪಿ ವಿದ್ಯಾರ್ಥಿಗಳು ಧಗವಜದೊಂದೊಗೆ ಜಾಥದಲ್ಲಿ ಪಾಲ್ಗೊಂಡರು.
