ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಮತ್ತು ಶಾಸಕ ಅಪ್ಪಚ್ಚು ರಂಜನ್ ಸಹೋದರ ಸುಜಾ ಕುಶಾಲಪ್ಪ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಕುಶಾಲಪ್ಪ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕುಶಾಲಪ್ಪ ಅವರನ್ನು ದಾಖಲಿಸಲಾಗಿದೆ. ಘಟನೆಗೆ ತೀವ್ರ ಆಕ್ರೋಶ ಮತ್ತು ದಿಗ್ಭ್ರಮೆ ವ್ಯಕ್ತ ಪಡಿಸಿರುವ ಬಿಜೆಪಿ ಶುಕ್ರವಾರ (ಜ 10) ಕೊಡಗು ಜಿಲ್ಲಾ ಬಂದಿಗೆ ಕರೆ ನೀಡಿದೆ. ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಕುಶಾಲಪ್ಪನವರಿದ್ದ ಆಲ್ಟೋ ಕಾರಿನ ಮೇಲೆ ಏಕಾಏಕಿ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಕುಶಾಲಪ್ಪ ತಮ್ಮ ಕುಟುಂಬದವರ (ಪುತ್ರ ಶಶಾಂಕ್) ಜೊತೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆಂದು ವರದಿಯಾಗಿದೆ.
ಕುಶಾಲಪ್ಪನವರ ಕುತ್ತಿಗೆಗೆ ನಾಲ್ಕು ಗುಂಡಿನ ದಾಳಿ ತಗುಲಿದ್ದು, ಅವರ ಜೊತೆಗಿದ್ದ ಪುತ್ರ ಶಶಾಂಕಿಗೆ ಏನೂ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ. ಘಟನೆ ನಡೆದ ಕೂಡಲೇ ಕುಶಾಲಪ್ಪ ಹಿಂಬಾಲಕರು ದುಷ್ಕರ್ಮಿಗಳನ್ನು ಬೆನ್ನಟ್ಟಿದರೂ, ಅವರನ್ನು ಹಿಡಿಯುವಲ್ಲಿ ವಿಫಲರಾಗಿದ್ದಾರೆ. ಮೈಸೂರಿನಲ್ಲಿ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅಪ್ಪಚ್ಚು ರಂಜನ್, ಕುಶಾಲಪ್ಪನ ಆರೋಗ್ಯ ಸ್ಥಿರವಾಗಿದೆ. ಘಟನೆಗೆ ರಾಜಕೀಯ ಹಿನ್ನಲೆ ಇದೆಯೇ ಎಂದು ಸದ್ಯಕ್ಕೆ ತಿಳಿದುಬಂದಿಲ್ಲ. ಸೂಕ್ತವಾದ ತನಿಖೆ ನಡೆಯ ಬೇಕೆಂದು ಸರಕಾರವನ್ನು ಕೋರುತ್ತೇವೆ ಎಂದು ಹೇಳಿದ್ದಾರೆ. ಶೂಟೌಟ್ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದ್ದು, ಇತರ ಹತ್ತಿರದ ಜಿಲ್ಲಾ ಪೊಲೀಸ್ ಕಚೇರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಎಸ್ಪಿ ತಿವಾರಿ ಹೇಳಿದ್ದಾರೆ.
