ಗುರುಪುರ : ಪರಿಸರ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ ಹಾಗೂ ಸಾಮಾಜಿಕ ಜಾಗೃತಿಗಳ ಮೂಲಕ ರಾಜ್ಯಾದ್ಯಂತ ಗಮನಸೆಳೆದಿರುವ ಸರ್ಕಾರೇತರ ಸಂಘಟನೆ(ಎನ್ಜಿಒ) ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಇದರ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ ಮತ್ತವರ ಸಮಿತಿ ಸದಸ್ಯರ ನಿಯೋಗ ಉಪಮುಖ್ಯಮಂತ್ರಿ ಡಿ ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಕರಾವಳಿ ಕರ್ನಾಟಕ ಸಹಿತ ರಾಜ್ಯದ ಹಿತದೃಷ್ಟಿಯಿಂದ ಸಮಿತಿ ಕೈಗೊಂಡಿರುವ ಕೆಲಸಗಳಿಗೆ ಸಹಕಾರ ಮತ್ತು ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿತು.

ಬೆಂಗಳೂರಿನಲ್ಲಿ ಮೇ. ೨೩ರಂದು ಡಿಕೇಶಿ ಅವರ ಬಂಗಲೆಯಲ್ಲಿ ಭೇಟಿಯಾದ ಸಮಿತಿ ಪದಾಧಿಕಾರಿಗಳು ಸಮಿತಿಯು ಈವರೆಗೆ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ನಡೆಸಿರುವ ಪರಿಸರ ಸಂರಕ್ಷಣೆ, ಸಾಮಾಜಿಕ ಜಾಗೃತಿ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ಸಮಿತಿ ವತಿಯಿಂದ ಜಯಕೃಷ್ಣ ಶೆಟ್ಟಿ ಮತ್ತು ರಾಜ್ಯ ಸಂಚಾಲಕ ಜಗದೀಶ ಅಧಿಕಾರಿ ಅವರು ಕೆಪಿಸಿಸಿ ಅಧ್ಯಕ್ಷ ಹಾಗೂ ಸಂಭಾವ್ಯ ಮುಖ್ಯಮಂತ್ರಿ ಡಿಕೇಶಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಮಿತಿಯ ನಿಯೋಗದೊಂದಿಗೆ ಮಾತನಾಡಿ, “ಸಾಮಾಜಿಕ ಹಿತದೃಷ್ಟಿಯಿಂದ ಸಮಿತಿಯು ಕೈಗೊಂಡಿರುವ ವಿನೂತನ ಯೋಜನೆಗಳು ಹಾಗೂ ಪರಿಸರಾಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡುವೆ. ಪ್ರಕೃತಿ ಉಳಿಸುತ್ತಲೇ ಪ್ರಗತಿ ಸಾಧಿಸುವ ಇಂತಹ ಸಂಘಟನೆಗಳ ಶ್ರಮ ಸಮಾಜಕ್ಕೆ ಅತ್ಯಗತ್ಯ” ಎಂದರು.
