ಬಂಟ್ವಾಳ:ಜಿಲ್ಲೆಯಲ್ಲಿ ಸಾವಿರಾರು ವರ್ಷಗಳ ಹಿನ್ನೆಲೆ ಹೊಂದಿರುವ ತುಳುನಾಡಿನ ಸಾಂಪ್ರದಾಯಿಕ ಕೋಳಿ ಅಂಕಗಳಿಗೆ ಜೂಜು ರಹಿತವಾಗಿ ನಡೆಸಲು ಅವಕಾಶ ನೀಡಬೇಕು ಎಂದು ಸಾಂಪ್ರದಾಯಿಕ ಆಚರಣಾ ಹಿತ ರಕ್ಷಣಾ ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ಶಿವಣ್ಣ ಗೌಡ ಇಡ್ಯಾಡಿ ಅಗ್ರಹಿಸಿದ್ದಾರೆ.

ಶನಿವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಸಾಂಪ್ರದಾಯಿಕ ಆಚರಣಾ ಹಿತ ರಕ್ಷಣಾ ವೇದಿಕೆಯ ವತಿಯಿಂದ ಮಾ. 24ರಂದು ಬೆಳಿಗ್ಗೆ 9.30ಕ್ಕೆ ಬಂಟ್ವಾಳ ತಾಲೂಕಿನ ವಗ್ಗ ಸಮೃದ್ಧಿ ಸಹಕಾರ ಸೌಧ ಸಭಾಂಗಣದಲ್ಲಿ ಸಮಾಲೋಚನೆ ಆಯೋಜಿಸಲಾಗಿದೆ.ಇದರಲ್ಲಿ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಜಿಲ್ಲೆಯಲ್ಲಿ ವಿವಿಧ ಹಲವಾರು ದೈವಸ್ಥಾನ ಗಳ ಜಾತ್ರೆ,ನೇಮೋತ್ಸವದ ಬಳಿಕ ಸಾಂಪ್ರದಾಯಿಕವಾಗಿ ಕೋಳಿ ಅಂಕ ನಡೆಸಲಾಗುತ್ತಿದೆ.ಇದುವರೆಗೆ ಸಂಪ್ರದಾಯಿಕ ಕೋಳಿ ಅಂಕಕ್ಕೆ ಅಡ್ಡಿ ಇರಲಿಲ್ಲ ಆದರೆ ಇದೀಗ ಜೂಜು ರಹಿತ ಸಾಂಪ್ರದಾಯಿಕ ಕೋಳಿ ಅಂಕ ನಡೆಸುವುದಕ್ಕೂ ಪೊಲೀಸ್ ಇಲಾಖೆ ಅಡ್ಡಿಪಡಿಸುವ ಮೂಲಕ ಜನರ ಧಾರ್ಮಿಕ ಭಾವನೆಗೆ ನೋವನ್ನುಂಟು ಮಾಡಿದೆ ಎಂದು ಆರೋಪಿಸಿದರಲ್ಲದೆ ಜೂಜು ರಹಿತ ಕೋಳಿ ಅಂಕಕ್ಕೆ ಪೊಲೀಸ್ ಅಧಿಕಾರಿಗಳ ನಡೆಸುವ ದಾಳಿ ಕಾರ್ಯಾಚರಣೆಯನ್ನು ಖಂಡಿಸಿದರು.
ಈಗಾಗಲೇ ಇಂತಹ ಸಂಪ್ರದಾಯಕ್ಕೆ ಅಡ್ಡಿಪಡಿದವರ ವಿರುದ್ಧ ದೈವಗಳಿಗೆ ಸಾಮೂಹಿಕ ಪ್ರಾರ್ಥನೆ ಮೂಲಕ ದೂರಿಕೊಳ್ಳಲಾಗಿದೆ. ಕುದುರೆ ರೇಸ್, ಕಂಬಳ, ಜಲ್ಲಿಕಟ್ಟು ಬೆಂಬಲಿಸುವ ಸರ್ಕಾರ ಕೋಳಿ ಅಂಕಕ್ಕೆ ಮಾತ್ರ ಯಾಕೆ ಅಡ್ಡಿ ಪಡಿಸಲಾಗುತ್ತಿದೆ ಎಂದು ಪ್ರಶ್ನಿಸಿರದ ಸಿಎಂ., ಗೃಹಸಚಿವರು ಸಹಿತ ಜಿಲ್ಲೆಯ ಎಲ್ಲಾ ಶಾಸಕರಿಗೂ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೊಷ್ಟಿಯಲ್ಲಿ ಸಮಿತಿ ಅಧ್ಯಕ್ಷ ಬೆಳ್ಳಿಯಪ್ಪ ಗೌಡ ತಿಮರೆಗುಡ್ಡೆ, ಪ್ರಮುಖರಾದ ಆನಂದ ಪೂಜಾರಿ ಕಡಬ, ಗಂಗಾಧರ ಪೂಜಾರಿ ಕಜೆಕಾರು, ಹರೀಶ ದಾಸ್ ಕಾವಳಕಟ್ಟೆ ಉಪಸ್ಥಿತರಿದ್ದರು
