ಬಂಟ್ವಾಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಾಬ್ದಿಯ ಸಂಭ್ರಮದಲ್ಲಿರುವ ಈ ಸಂದರ್ಭದಲ್ಲಿ ಪಂಚ ಪರಿವರ್ತನೆಯ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಂಡು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದುವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದ್ದಾರೆ.

ಕೊಡ್ಮಾಣ್ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ ಹಳೇ ವಿದ್ಯಾರ್ಥಿ ಸಂಘಮತ್ತು ದ. ಕ. ಜಿ. ಪಂ. ಪ್ರೌಢಶಾಲೆ ಕೊಡ್ಮಾಣ್ ಇದರ 46ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ದೇವರ ಮೇಲೆ ಭಕ್ತಿ ನಂಬಿಕೆ ಇಟ್ಟ ಸಮಾಜ ನಮ್ಮದು, ನಾರಿ ಶಕ್ತಿ ಜಾಗೃತಿಯಾಗಿ ದೇಶದ ಭವಿಷ್ಯ ಉಜ್ವಲವಾಗಲಿ ಎಂದು ಹೇಳಿದರು.
ಬಂಟ್ವಾಳ ಉಪ ತಹಸೀಲ್ದಾರ್ ನವೀನ ಬೆಂಜನಪದವು ಮಾತನಾಡಿ ಅಂದಿನ ಹಾಗೂ ಇಂದಿನ ಶಿಕ್ಷಣಕ್ಕೆ ಅಜಗಜಾಂತರ ವ್ಯತ್ಯಾಸವಿದೆ, ಕಲಿಕೆ ಕೇವಲ ಅಕ್ಷರಭ್ಯಾಸವಾಗದೆ ಸಂಸ್ಕಾರಯುತಬೇಕು, ಮಕ್ಕಳಿಗೆ ಮನೆಯಲ್ಲಿ ಸರಿಯಾದ ಸಂಸ್ಕಾರ ಸಿಗಬೇಕು ಎಂದು ಹೇಳಿದರು.
ಎಕ್ಸೆಲ್ ಪಿ ಯು ಕಾಲೇಜು ಪ್ರಾಚಾರ್ಯ ಪ್ರಜ್ವಲ್ ನಿಡ್ಲೆ ಮಾತನಾಡಿ, ಈ ದೇಶದ ಅಂತಃಸತ್ವ ವಿಭಿನ್ನವಾಗಿದೆ, ಯಾವುದೇ ವ್ಯಾಮೋಹಕ್ಕೆ ಬಲಿಯಾಗದ ಗಟ್ಟಿ ಸಂಸ್ಕೃತಿ ಪರಂಪರೆ ನಮ್ಮದು, ಸುಂದರ ಸಮಾಜಕ್ಕಾಗಿ ವೇದ, ವಿಜ್ಞಾನ, ಯೋಗ, ಕೃಷಿ, ಕಲಾಕೌಶಲ ಈ ಪಂಚಮುಖಿ ಶಿಕ್ಷಣವನ್ನು ಜೀವನದಲ್ಲಿ ರೂಪಿಸಿಕೊಳ್ಳೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಗೋಪಾಲಕೃಷ್ಣ ಶೆಟ್ಟಿ ಕೊಡ್ಮಾಣ್ ವಹಿಸಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಶಾಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಾಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು ಹಾಗೂ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿ ರಾಜೇಶ್ ಶೆಟ್ಟಿ ಜಪ್ಪುಗುಡ್ಡೆಗುತ್ತು, ಮಾಜಿ ಗ್ರಾ ಪಂ ಅಧ್ಯಕ್ಷ ಗಂಗಾಧರ ಪೂಜಾರಿ, ರಶ್ಮಿ ಪ್ಲವರ್ಸ್ ಮಾಲಕ ವಿಶ್ವನಾಥ ಕುಲಾಲ್ ಚಾಪೆ, ಸುಲೋಚನಾ ಕೆ ಶೆಟ್ಟಿ ಕೊಡ್ಮಾಣ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಭಾಸ್ಕರ್ ರಾವ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪ್ರೇಮಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ದೇವದಾಸ ಕೊಡ್ಮಾಣ್, ಮಾಧವಿ ಸಂದೀಪ್ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆನಂದ ಆಳ್ವ ಪೊನ್ನೋಡಿ, ಕಾರ್ಯದರ್ಶಿ ಜಗದೀಶ ಕಾಂಜಿಲಕೊಡಿ ಉಪಸ್ಥಿತರಿದ್ದರು.
ಸಂತೋಷ ಪೊನ್ನೋಡಿ ಪ್ರಸ್ತಾವಿಸಿ, ಸ್ವಾಗತಿಸಿದರು, ಡಾ ಸ್ವಾತಿ ಹಾಗೂ ಶಶಿಧರ ಕೊಡ್ಮಾಣ್ ಬಹುಮಾನಿತರ ಪಟ್ಟಿ ವಾಚಿಸಿದರು, ಯಜ್ಞೇಶ್ವರಿ ಎನ್ ಕೊಡ್ಮಾಣ್ ಸನ್ಮಾನಿತರ ಬಗ್ಗೆ ಮಾತನಾಡಿದರು,ಸುಜಿತ್ ಕೊಡ್ಮಾಣ್ ಕೊಡಿ ವಂದಿಸಿದರು ಮನಿಷಾ ಕಾರ್ಯಕ್ರಮ ನಿರೂಪಿಸಿದರು.
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಅನ್ನ ಸಂತರ್ಪಣೆ, ಶಾಲಾ ಮಕ್ಕಳಿಂದ ಹಾಗೂ ಹಳೇ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತುಳು ನಾಟಕ ಪ್ರದರ್ಶನಗೊಂಡಿತು.
