ವಿವಿಧ ಒಕ್ಕೂಟಗಳ ಸಹಯೋಗದೊಂದಿಗೆ “ದೀಪ ಸಂಜೀವಿನಿ” ಹಾಗೂ “ಮಾಸಿಕ ಸಂತೆ ಕಾರ್ಯಕ್ರಮ”
ಬಂಟ್ವಾಳ: ತಾಲೂಕಿನ ಗ್ರಾಮ ಪಂಚಾಯತ್ ಮಟ್ಟದ ವಿವಿಧ ಒಕ್ಕೂಟಗಳ ಸಹಯೋಗದೊಂದಿಗೆ ದೀಪಾವಳಿ ಪ್ರಯುಕ್ತ “ದೀಪ ಸಂಜೀವಿನಿ” ಹಾಗೂ “ಮಾಸಿಕ ಸಂತೆ ಕಾರ್ಯಕ್ರಮ”ಬಂಟ್ವಾಳ ತಾಲೂಕಿನ ಮಾಣಿ ಸಂತೆ ಮಾರುಕಟ್ಟೆಯಲ್ಲಿ ಜರಗಿತು.

ದೀನ ದಯಾಳ್ ಅಂತ್ಯೋದಯ ಯೋಜನೆ,ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ,ಕೌಶಲ್ಯಾ ಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ,ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ,ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ,ಬಂಟ್ವಾಳ ತಾಲೂಕು ಪಂಚಾಯತ್ , ಗ್ರಾಮ ಪಂಚಾಯತ್ ಮಟ್ಟದ ವಿವಿಧ ಒಕ್ಕೂಟಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಣಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದಸುದೀಪ್ ಕುಮಾರ್ ಶೆಟ್ಟಿ ಅವರು ವಹಿಸಿದ್ದರು.ಪಂಚಾಯತ್ ಸದಸ್ಯ ಬಾಲಕೃಷ್ಣ ಆಳ್ವ, ಇಬ್ರಾಹಿಂ,ಮೆಲ್ವಿನ್ ಕಿಶೋರ್ ಮಾರ್ಟಿಸ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಹರಿಪ್ರಸಾದ್ ಉಪಸ್ಥಿತರಿದ್ದರು . ಮಹಿಳೆಯರೇ ಉತ್ಪಾದಿಸಿದಂತಹ ಉತ್ಪನ್ನಗಳ ಮಾರಾಟ ನಡೆಯಿತು.

ದೀಪ ಸಂಜೀವಿನಿಯ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಮಣ್ಣಿನ ಹಣತೆಗಳನ್ನು ಮಾರಾಟ ಮಾಡಲಾಯಿತು. ಪ್ರಕೃತಿ ಸ್ನೇಹಿ ಮಣ್ಣಿನ ಹಣತೆಯ ಬೇಡಿಕೆಯು ಉತ್ತಮವಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ ದೀಪಾವಳಿಯ ಪ್ರಯುಕ್ತ ಸಂಜೀವಿನಿ ಒಕ್ಕೂಟದ ಮಹಿಳೆಯರು ತಯಾರಿಸಿದ ಸಿಹಿ ತಿಂಡಿಯ ಪ್ಯಾಕೆಟನ್ನು ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಸುಧಾ ಅವರು ನೀಡಿ ಗೌರವಿಸಿದರು.
ಬಂಟ್ವಾಳ ತಾಲೂಕಿನ 38 ಗ್ರಾಮ ಪಂಚಾಯತ್ ನ ಒಕ್ಕೂಟದ ಉದ್ಯಮದಾರರು ಹಾಗೂ ಒಕ್ಕೂಟದ ಸಿಬ್ಬಂದಿಗಳು, ತಾಲೂಕು ಸಂಜೀವಿನಿ ಅಭಿಯಾನ ಘಟಕದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.



