ಬಜಪೆ: ರಾಜ್ಯ ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು ೬೦ ಕೋ. ರೂ. ವೆಚ್ಚದಲ್ಲಿ ನಿರ್ಮಿಸಲಾದ ಮರವೂರು ನೂತನ ಸೇತುವೆ ಹಾಗೂ ಏರ್ಪೋರ್ಟ್ ಸಿ.ಸಿ ರಸ್ತೆಯನ್ನು ಸೆ. ೬ರಂದು ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು.

ಸುಮಾರು ೭ ತಿಂಗಳ ಹಿಂದೆ ವಾಹನ ಸಂಚಾರ ಆರಂಭಗೊಂಡಿದ್ದ ನೂತನ ಸೇತುವೆಯನ್ನು ಶನಿವಾರ ಅಧಿಕೃತವಾಗಿ ಉದ್ಘಾಟಿಸಿದ ಶಾಸಕ ಕೋಟ್ಯಾನ್ ಅವರು ಮಾತನಾಡಿ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ಒಪ್ಪಿಗೆ ಮೇರೆಗೆ ಸೇತುವೆ ಲೋಕಾರ್ಪಣೆಗೊಳಿಸುತ್ತಿದ್ದೇವೆ. ಹೊಸ ಸೇತುವೆ ಪಕ್ಕದಲ್ಲಿರುವ ಹಳೆ ಸೇತುವೆ ದುರಸ್ತಿ ಕಾರ್ಯಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ. ಅನುದಾನ ಬಿಡುಗಡೆಯಾಗುತ್ತಲೇ ಕಾಮಗಾರಿ ಆರಂಭವಾಗಲಿದೆ. ದುರಸ್ತಿ ಬಳಿಕ ಹಳೆ ಸೇತುವೆಯೂ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದರು.

ಏರ್ಪೋರ್ಟ್ ಭಾಗದಿಂದ ವಾಹನ ದಟ್ಟಣಿ ಇರುವುದರಿಂದ ಪದೇಪದೇ ಅಪಘಾತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಇಲ್ಲಿ ಸೂಕ್ತ ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ ಎಂದ ಕೋಟ್ಯಾನ್, ಈ ಭಾಗದಲ್ಲಿ ಕೆಲವು ರಸ್ತೆ ಕೆಟ್ಟು ಹೋಗಿವೆ. ಕರ್ಮಾರು ರಸ್ತೆಗೆ ೭೫ ಲಕ್ಷ ರೂ ಅನುದಾನ ಇಟ್ಟು ಮೇ ತಿಂಗಳಲ್ಲಿ ಭೂಮಿಪೂಜೆ ನಡೆಸಿದ್ದೇವೆ. ಮಳೆ ನಿಂತ ಮೇಲೆ ದುರಸ್ತಿ ಕಾರ್ಯ ಆರಂಭವಾಗಲಿದೆ ಎಂದರು.
ಬಿಜೆಪಿ ಮುಖಂಡ ಗಣೇಶ್ ಅರ್ಬಿ ಅವರು ಸ್ವಾಗತಿಸಿದರು. ಮೂಡಬಿದ್ರೆ ರೈತ ಮೋರ್ಚಾದ ಅಧ್ಯಕ್ಷ ರಾಜೇಶ್ ಅಮೀನ್(ಆರ್ಕೆ), ಬಜ್ಪೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ ಕುಮಾರ್ ಕೆಂಜಾರು, ಬಿಜೆಪಿ ಪ್ರಮುಖರಾದ ಸುಧಾಕರ ಕಾಮತ್, ಜೋಕಿಂ ಡಿ’ಕ್ರಾಸ್ತ, ದಿನೇಶ್ ಶೆಟ್ಟಿ, ಜಯಂತ್ ತೋಕೂರು, ಲೋಕೇಶ್ ಪೂಜಾರಿ ಬಜ್ಪೆ, ಅಭಿಲಾಷ್ ಶೆಟ್ಟಿ, ಸತೀಶ್ ದೇವಾಡಿಗ, ಸುಮಾ ಬಿ. ಶೆಟ್ಟಿ, ಸುಹಾಸಿನಿ, ಜಿತೇಶ್ ಕೆಂಜಾರು, ಉಮೇಶ್ ಪೂಜಾರಿ, ಪ್ರವೀಣ್ ಶೆಟ್ಟಿ ಕಟ್ಟಪುಣಿ, ಲಕ್ಷö್ಮಣ್ ಬಂಗೇರ ಮತ್ತು ನೂತನ ಸೇತುವೆ ನಿರ್ಮಾಣ ಕಂಪೆನಿ ಮೊಗರೋಡಿ ಕನ್ಸ್ಟçಕ್ಷನ್ನ ಪ್ರಧಾನ ಇಂಜಿನಿಯರ್ ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.
