ಬಂಟ್ವಾಳ :ಪ್ರಸ್ತಾವಿತ ಕರ್ನಾಟಕ ರೋಹಿತ್ ವೇಮುಲ ಮಸೂದೆ-2025 ಯನ್ನು ಆಕ್ಷೇಪಿಸಿ ಹಿಂದೂ ಜನಜಾಗೃತಿ ಸಮಿತಿಯು ಕರ್ನಾಟಕ ರಾಜ್ಯಪಾಲರಿಗೆ ಬಂಟ್ವಾಳ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಿದೆ.ಗುರುವಾರ ಸಮಿತಿಯ ಪದಾಧಿಕಾರಿಗಳ ನಿಯೋಗ ಬಂಟ್ವಾಳ ತಹಶೀಲ್ದಾರರಾದ ಡಿ. ಅರ್ಚನಾ ಭಟ್ ಅವರನ್ನು ಭೆಟಿಯಾಗಿಂವಿ ಸಲ್ಲುಸಿದೆ.

ಪ್ರಸ್ತಾವಿತ “ಕರ್ನಾಟಕ ರೋಹಿತ್ ವೇಮುಲ (ಬಹಿಷ್ಕಾರ ಅಥವಾ ಅನ್ಯಾಯವನ್ನು ತಡೆಗಟ್ಟುವಿಕೆ) ಮಸೂದೆ- 2025” ತಾರತಮ್ಯ ಮತ್ತು ಅಸಂವಿಧಾನಿಕವಾಗಿದ್ದು, ರಾಜಕೀಯ ಪ್ರೇರಿತವಾಗಿದೆ ಎಂದು ಸಮಿತಿ ಮನವಿಯಲ್ಲಿ ಆರೋಪಿಸಿದೆ.
ಈ ಮಸೂದೆಯು ಕೆಲ ಸಮುದಾಯಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಿ, ಬಹುಸಂಖ್ಯಾತ ಹಿಂದೂ ವಿದ್ಯಾರ್ಥಿಗಳನ್ನು ಕಡೆಗಣಿಸುತ್ತದೆ. ಇದು ಸಂವಿಧಾನದ 14ನೇ ವಿಧಿಯಲ್ಲಿರುವ ‘ಕಾನೂನಿನ ಮುಂದೆ ಎಲ್ಲರೂ ಸಮಾನರು’ ಎಂಬ ತತ್ವವನ್ನು ಉಲ್ಲಂಘಿಸಿದಂತಾಗುತ್ತದೆ. ಈ ಮಸೂದೆ ರಾಜಕೀಯ ಪ್ರೇರಿತವಾಗಿದ್ದು, ದಿವಂಗತ ರೋಹಿತ್ ವೇಮುಲ ಅವರ ಜಾತಿ ಗುರುತಿನ ವಿವಾದದ ಮಧ್ಯೆಯೂ, ಅವರ ಹೆಸರನ್ನು ಬಳಸಿಕೊಂಡಿರುವುದು ಸರಿಯಲ್ಲ ಎಂದು ಸಮಿತಿ ಮನವಿಯಲ್ಲಿ ಅಭಿಪ್ರಾಯಪಟ್ಟಿದೆ.
ಹಾಗಾಗಿ ಈ ಮಸೂದೆಯನ್ನು ಹಿಂತೆಗೆದುಕೊಳ್ಳುವುದು ಅಥವಾ ಮರು-ಕರಡು ರಚಿಸಬೇಕು,ಮಸೂದೆಯ ಅವಶ್ಯಕತೆ ಮತ್ತು ಸಂವಿಧಾನದ ಸಿಂಧುತ್ವದ ಬಗ್ಗೆ ಕಾನೂನು , ಶಿಕ್ಷಣ ತಜ್ಞರು ಮತ್ತು ಎಲ್ಲಾ ಸಮುದಾಯಗಳ ವಿದ್ಯಾರ್ಥಿ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಬೇಕು, ಈ ಮಸೂದೆಯು ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವ ಸಾಧ್ಯತೆ ಇರುವುದರಿಂದ ರಾಜ್ಯಪಾಲರು ಮಧ್ಯಪ್ರವೇಶಿಸಿ, ಸಮಗ್ರ ಚರ್ಚೆ ನಡೆಯುವವರೆಗೆ ಮಸೂದೆಯನ್ನು ತಡೆಹಿಡಿಯಬೇಕು ಎಂದು ಸಮಿತಿ ಆಗ್ರಹಿಸಿದೆ.
ಈ ಸಂದರ್ಭ ಸಮಿತಿ ಪದಾಧಿಕಾರಿಗಳಾದ ವಿಜಯ ಕುಮಾರ್, ಮಿಥುನ್ ಪೂಜಾರಿ, ಸದಾಶಿವ ಗೌಡ, ಅಭಿಷೇಕ್, ಶಿವ ನಾಯ್ಕ್, ಗಿರೀಶ ಹೆಗಡೆ, ಸೋಮನಾಥ್ ಸಾಲ್ಯಾನ್, ವಿಕಾಸ್ ಹೊಳ್ಳರಬೈಲ್, ರೋಹಿತ್ ಕೋಟ್ಯಾನ್, ರಾಧಾಕೃಷ್ಣ, ಕಿರಣ್ ಮಾದಲಾದವರಿದ್ದರು.
