ಮಾಣಿ ಜಂಕ್ಷನ್ಗೆ ಬಾರದ ಬಸ್ :ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಕೆಎಸ್ ಆರ್ ಟಿಸಿಗೆ ಪತ್ರ
ಬಂಟ್ವಾಳ: ಫ್ಲೈಓವರ್ ನಿರ್ಮಾಣದ ಬಳಿಕಉಪ್ಪಿನಂಗಡಿಯಿಂದ ಬರುವ ಬಸ್ಸುಗಳು ಮಾಣಿ ಜಂಕ್ಷನ್ಗೆ ಬಾರದಿರುವುದರಿಂದ ಮಾಣಿ ಗ್ರಾಮದ ಜನಸಾಮಾನ್ಯರಿಗೆ ಉಂಟಾಗುತ್ತಿರುವ ಸಮಸ್ಯೆಯ ಹಿನ್ನಲೆಯಲ್ಲಿ ಕೆ.ಎಸ್.ಆರ್.ಟಿ.ಸಿ.ಯ ಮಂಗಳೂರು ಮತ್ತು ಪುತ್ತೂರು ನಿಯಂತ್ರಣಾಧಿಕಾರಿಯವರಿಗೆ ಪತ್ರ ಬರೆದು ಕ್ರಮಕೈಗೊಳ್ಳಲು ಸೋಮವಾರ ಬಂಟ್ವಾಳ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಬಂಟ್ವಾಳ ತಾಲೂಕು ಪಂಚಾಯತಿನಲ್ಲಿರುವ ಪಂಚ ಗ್ಯಾರಂಟಿ ಸಮಿತಿಯ ಬಂಟ್ವಾಳ ತಾಲೂಕುಮಟ್ಟ ಸಮಿತಿಯ ಕಚೇರಿಯಲ್ಲಿ
ಪಂಚ ಗ್ಯಾರೆಂಟಿ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಇದೇ ವೇಳೆ ಅನಂತಾಡಿ ಗ್ರಾಮದ ಬಂಟ್ರಿಂಜ – ವಿಟ್ಲ ರಸ್ತೆಯಲ್ಲಿ ಬಸ್ ಸಂಚಾರಕ್ಕೆ ಕ್ರಮಕೈಗೊಳ್ಳುವಂತೆ ಗ್ಯಾರಂಟಿ ಸಮಿತಿಯ ಮನವಿಗೆ ಸ್ಪಂದಿಸಿ ಬಸ್ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸಿದ ಕೆಎಸ್ಆರ್ ಟಿಸಿಯ ಮಂಗಳೂರು ಡಿಪ್ಪೋ ದ ನಿಯಂತ್ರಣಾಧಿಕಾರಿಯವರಿಗೆ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಲಾಯಿತು.
ಕೊರೋನ ಸಂದರ್ಭ ಸ್ಥಗಿತಗೊಂಡಿದ್ದ
ಬಿ.ಸಿ.ರೋಡು- ಕಲ್ಲಡ್ಕ – ಕರಿಂಗಾಣ ಬಸ್ ಸಂಚಾರವನ್ನು ಕೂಡ ಸಮಿತಿಯ ಮನವಿಗೆ ಸ್ಪಂದಿಸಿ ಮರಳಿ ಬಸ್ಸು ಸಂಚಾರವನ್ನು ಆರಂಭಿಸಿರುವುದಕ್ಕು ಕೃತಜ್ಞತೆ ಸಲ್ಲಿಸಲಾಯಿತು.
ಪಡಿತರಚೀಟಿ: ಸರಕಾರಕ್ಕೆ ಪತ್ರ:-
ಹೊಸ ಪಡಿತರ ಚೀಟಿಯನ್ನು ವಿತರಿಸುವ ನಿಟ್ಟಿನಲ್ಲಿ ಮತ್ತು ವೈದ್ಯಕೀಯ ಕಾರಣಕ್ಕಾಗಿ ವಿತರಿಸುತ್ತಿದ್ದ ಪಡಿತರ ಚೀಟಿಯನ್ನು ಸ್ಥಗಿತಗೊಳಿಸಿರುವುದರಿಂದ ಜನ ಸಾಮಾನ್ಯರಿಗಾಗುತ್ತಿರುವ ತೊಂದರೆಯ ಹಿನ್ನಲೆಯಲ್ಲಿ ಸರಕಾರಕ್ಕೆ ಪತ್ರ ಬರೆಯುವುದೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ತಾಲೂಕು ಪಂಚಾಯತ್ ಇಒ, ತಾಲೂಕು ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಕಾರ್ಯದರ್ಶಿಸಚ್ಚಿನ್ ಕುಮಾರ್, ಪಂಚ ಗ್ಯಾರೆಂಟಿ ಅನುಷ್ಠಾನಕ್ಕೆ ಸಂಬಂಧಿಸಿದ ವಿವಿಧ ಇಲಾಖಾಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
13 ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ
ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿ ವತಿಯಿಂದ ಉಚಿತ ದಂತ ಮತ್ತು ಆರೋಗ್ಯ ತಪಾಸಣಾ ಶಿಬಿರವು ಬಿ.ಸಿ.ರೋಡಿನ ಡಾ| ಬಿ.ಆರ್. ಅಂಬೆಡ್ಕರ್ ಭವನದಲ್ಲಿ ಜು.13 ರಂದು ಬೆ.9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಯೋಜಿಸಲಾಗಿದೆ.
ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆಯುವಂತೆ ಪಂಚ ಗ್ಯಾರೆಂಟಿ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಜಯಂತಿ ವಿ. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



