ಮಂಗಳೂರು: ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಕಶೆಕೋಡಿ ಎಂಬಲ್ಲಿ ಕಳೆದ 2013ನೇ ಫೆಬ್ರವರಿ 24ರಂದು ಅತ್ಯಾಚಾರಕ್ಕೆ ಪ್ರತಿರೋಧ ತೋರುವ ವೇಳೆ ಕೊಲೆಗೀಡಾದ ಸೌಮ್ಯಳ ಹಂತಕ ಸತೀಶ್ ಎಂಬಾತನಿಗೆ ಜಿಲ್ಲಾ ಆರನೇ ಹೆಚ್ಚುವರಿ ನ್ಯಾಯಾಲಯ ಸಾಯುವ ತನಕ ಅಜೀವ ಕಾರಾಗೃಹವಾಸ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.
ಬಾಳ್ತಿಲ ನಿವಾಸಿ ಸೌಮ್ಯ(21) ಎಂಬಾಕೆಯನ್ನು ಸತೀಶ್ ಅತ್ಯಾಚಾರಕ್ಕೆ ಯತ್ನಿಸಿ ಆಕೆ ಒಪ್ಪದೇ ಇದ್ದಾಗ ಕೊಲೆಮಾಡಿ ಪರಾರಿಯಾಗಿದ್ದ. ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶೆ ಪುಷ್ಪಾಂಜಲಿ ದೇವಿ ಅವರು, ಆರೋಪಿಗೆ ಅಜೀವ ಕಾರಾಗೃಹವಾಸ ಶಿಕ್ಷೆ ವಿಧಿಸಿ 30,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಮೊತ್ತವನ್ನು ಸಂತ್ರಸ್ತೆಯ ಮನೆಮಂದಿಗೆ ನೀಡಬೇಕೆಂದು ಆದೇಶಿಸಲಾಗಿದೆ.



ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಪ್ರಸಾದ್ ಆಳ್ವ ಕೆ. ಅವರು, ಸತೀಶ್ ಈಗ 25 ವರ್ಷ ಪ್ರಾಯದವನಾಗಿದ್ದು, ಅವನು ಒಂದು ವೇಳೆ ಸಾದಾ ಜೀವಾವಧಿ ಶಿಕ್ಷೆಗೆ ಗುರಿಯಾಗಿ 14 ವರ್ಷ ಶಿಕ್ಷೆ ಪಡೆದು ಬಿಡುಗಡೆಗೊಂಡಲ್ಲಿ ಮತ್ತೆ ಇಂಥದ್ದೇ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆಯಿದ್ದು, ಇಲ್ಲವೇ ಆತ ಸೌಮ್ಯಳ ಮನೆಮದಿಯನ್ನು ಬೆದರಿಸುವ ಸಾಧ್ಯತೆಯಿದೆ. ಆದ್ದರಿಂದ ಆರೋಪಿ ಸಾಯುವ ತನಕ ಜೈಲಿನಲ್ಲೇ ಇರಬೇಕು ಎಂದು ವಾದಿಸಿದ್ದಾರೆ.

