ವಿದ್ಯಾರ್ಥಿಗಳು ತಮ್ಮ ಗುರಿಯೆಡೆಗೆ ಗಮನಕೊಟ್ಟರೆ ಉತ್ತಮ ಭವಿಷ್ಯ :ಸೀತಾರಾಮ ಕುಮಾರ್ ಕಟೀಲು
ಬಂಟ್ವಾಳ: ವಿದ್ಯಾರ್ಥಿಗಳು ಅಧ್ಯಯನದ ಅವಧಿಯಲ್ಲಿ ಬೇರೆಡೆಗೆ ಆಕರ್ಷಿತರಾಗದೇ ಗುರಿಯೆಡೆಗೆ ಗಮನಕೊಟ್ಟರೆ ಉತ್ತಮವಾದ ಭವಿಷ್ಯ ರೂಪಿತವಾಗುತ್ತದೆ. ಎಲ್ಲಾ ಅಭಿವೃದ್ಧಿಗೂ ಪೋಷಕರು ತಮ್ಮ ಸರ್ವಸ್ವವನ್ನೂ ತ್ಯಾಗಮಾಡಿರುತ್ತಾರೆ. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಇರುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಸೀತಾರಾಮ ಕುಮಾರ್ ಕಟೀಲು ಹೇಳಿದರು.
ಬಂಟ್ವಾಳ ವಿದ್ಯಾಗಿರಿಯ ಶ್ರೀ ವೆಂಕಟರಮಣ ಸ್ವಾಮೀ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಶ್ರೀ ವೆಂಕಟರಮಣ ಸ್ವಾಮೀ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ರೇಖಾ ಕೆ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುಪ್ರೀತ್ ಕಡಕೋಳ್ ಪದವಿ ಕಾಲೇಜು ವಾರ್ಷಿಕ ವರದಿ ವಾಚಿಸಿದರು.
ಎಸ್.ವಿ.ಎಸ್. ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಸುದರ್ಶನ್ ಬಿ. ಪದವಿ ಪೂರ್ವ ಕಾಲೇಜಿನ ವರದಿ ವಾಚಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಶಿವಣ್ಣಪ್ರಭು ಕೆ ಅತಿಥಿಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕರಾದ ಗೀತಾ ಸ್ವಾಗತಿಸಿದರು, ರೂಪಾ ವಂದಿಸಿದರು. ಕಾರ್ಯಕ್ರಮದಲ್ಲಿ ೨೦೨೨-೨೩ನೇ ಸಾಲಿನ ವಿಶ್ವವಿದ್ಯಾಲಯ ಮಟ್ಟದ ರ್ಯಾಂಕ್ ವಿಜೇತರಿಗೆ ಸನ್ಮಾನಿಸಲಾಯಿತು. ಶೈಕ್ಷಣಿಕ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಎಸ್.ವಿ.ಎಸ್ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ‘ಶ್ರೀಚಕ್ರ ವಿಜಯ’ ಯಕ್ಷಗಾನ ಪ್ರದರ್ಶಿನ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.