ಕಾಸರಗೋಡು: ವೀರರ್ಕಾವು ದೇವಸ್ಥಾನದಲ್ಲಿ ಪಟಾಕಿ ದುರಂತ; 154 ಮಂದಿಗೆ ಗಾಯ, 8 ಮಂದಿ ಸ್ಥಿತಿ ಗಂಭೀರ

ಪಟಾಕಿ ದುರಂತ ಸಂಭವಿಸಿ 154 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರಂನ ವೀರರ್ಕಾವು ದೇವಸ್ಥಾನದ ಉತ್ಸವದ ವೇಳೆಯಲ್ಲಿ ಸಂಭವಿಸಿದೆ.
ಸಾಂಪ್ರದಾಯಿಕ ತೆಯ್ಯಂ ಉತ್ಸವಕ್ಕಾಗಿ ಮಧ್ಯರಾತ್ರಿಯ ನಂತರ ಸುಮಾರು 1,500 ಮಂದಿ ದೇವಸ್ಥಾನದಲ್ಲಿ ಜಮಾಯಿಸಿದ್ದರು. ತೆಯ್ಯಂ ಪ್ರದರ್ಶನವನ್ನು ವೀಕ್ಷಿಸಲು ಬಂದಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ.
ವೀರರ್ಕಾವು ದೇವಸ್ಥಾನದ ಬಳಿಯ ತಾತ್ಕಾಲಿಕ ಶೆಡ್ನಲ್ಲಿ ಪಟಾಕಿ ಸಂಗ್ರಹಿಸಿಡಲಾಗಿತ್ತು. ಈ ಶೆಡ್ಗೆ ಮೂವಳಂಕುಜಿ ಚಾಮುಂಡಿ ತೆಯ್ಯಂನ ‘ವೆಳ್ಳಟ್ಟಂ ಪುರಪ್ಪಡು’ಗೆ ಸಂಬಂಧಿಸಿದಂತೆ ಪಟಾಕಿ ಸಿಡಿಸುವ ವೇಳೆ ಈ ದುರಂತ ಸಂಭವಿಸಿದೆ ಎಂದು ಘಟನೆಯನ್ನು ಕಂಡ ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.
ಪಟಾಕಿ ದುರಂತದಲ್ಲಿ ಗಾಯಗೊಂಡ 154 ಮಂದಿ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಎಂಟು ಮಂದಿ ಗಂಭೀರವಾಗಿದ್ದಾರೆ. ಈಗಾಗಲೇ 97 ಮಂದಿಯನ್ನು ಕಾಸರಗೋಡು, ಕಣ್ಣೂರು ಹಾಗೂ ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.