ಬಂಟ್ವಾಳ: ಮಂಗಳೂರಿನಿಂದ ಪೊಳಲಿಗೆ ಕೆಎಸ್ ಆರ್ ಟಿಸಿ ಬಸ್ ಸಂಚಾರಕ್ಕೆ ಚಾಲನೆ

ಮಂಗಳೂರಿನಿಂದ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಕೆಎಸ್ ಆರ್ ಟಿಸಿ ಬಸ್ ಸಂಚಾರಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ. ಪೊಳಲಿ ಕ್ಷೇತ್ರದ ವಠಾರದಲ್ಲಿ ಕೆಎಸ್ ಆರ್ ಟಿಸಿಗೆ ಪೂಜೆ ನೆರವೇರಿಸಿದ, ಆ ಬಳಿಕ ಚಾಲನೆಗೊಂಡಿದೆ. ಶ್ರೀ ಪೊಳಲಿ ಕ್ಷೇತ್ರದಿಂದ ಬೆಂಜನಪದವು, ಕಲ್ಪನೆ ,ಕಡೇಗೋಳಿ, ಫರಂಗಿಪೇಟೆ, ಪಡೀಲಿನ ಮೂಲಕ ಮಂಗಳೂರಿಗೆ ಕೆ ಎಸ್ ಆರ್ ಟಿಸಿ ಬಸ್ ನ ವ್ಯವಸ್ಥೆಯು ಇರಲಿದೆ. ನವರಾತ್ರಿಯ ಬಳಿಕವು ಈ ಬಸ್ ನ ವ್ಯವಸ್ಥೆ ಮುಂದುವರಿಯಲಿದೆ.
ಹಲವು ವರ್ಷದಿಂದ ಈ ಮಾರ್ಗದ ಮೂಲಕ ಮಂಗಳೂರಿನಿಂದ ಪೊಳಲಿಗೆ ಸರಕಾರಿ ಬಸ್ ನ ವ್ಯವಸ್ಥೆ ಕಲ್ಪಿಸುವಂತೆ ಇಲ್ಲಿನ ನಾಗರಿಕರು ಕೆಎಸ್ ಆರ್ ಟಿಸಿ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಇದೀಗ ಇಲ್ಲಿನ ಜನರ ಬಹುಕಾಲದ ಕನಸು ನನಸಾಗಿದೆ. ಬ್ರಹ್ಮರಕೊಟ್ಲು ಯಕ್ಷಮಿತ್ರ ಸದಸ್ಯರು ಹಾಗೂ ಸ್ಥಳೀಯ ಮುಖಂಡರ ಮುಂದಾಳತ್ವದಿಂದ ನವರಾತ್ರಿಯ ಸಂದರ್ಭದಲ್ಲಿಯೇ ಕೆಎಸ್ ಆರ್ ಟಿಸಿಬಸ್ ಬಸ್ ಆರಂಭಗೊಂಡಿರುವುದು ಸ್ಥಳೀಯರಿಗೆ ಸಂತಸವನ್ನುಂಟು ಮಾಡಿದೆ.



