ಮೂಡಬಿದರೆ ಗುರುಬಸದಿಯಲ್ಲಿ ದಶ ಲಕ್ಷಣ ಪರ್ವ ಆಚರಣೆ
ಕೈಕಂಬ: ಮೂಡಬಿದರೆಶ್ರೀ ಜೈನ ಮಠ ಮತ್ತು ಗುರುಗಳ ಬಸದಿಯಲ್ಲಿ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ದಶಲಕ್ಷಣ ಪರ್ವ ಪೂಜಾ ಕಾರ್ಯಕ್ರಮ ರವಿವಾರ ದಿಂದ ಆರಂಭವಾಗಿ ಹತ್ತು ದಿನಗಳವರೆಗೆ ನಡೆಯಿತು.

ಸೆ.17ರ ವರೆಗೆ ವಿವಿಧ ಸೇವೆದಾರರ ಸಹಕಾರದಿಂದ ಶ್ರೀ ಮಠದಲ್ಲಿ ಬೆಳಗ್ಗೆ 7.30ರಿಂದ 8.30ರ ವರೆಗೆ ಹಾಗೂ ಗುರುಗಳ ಬಸದಿಯಲ್ಲಿ ಅಪರಾಹ್ನ 2ರಿಂದ 5.30ರ ವರೆಗೆ ದಶಧರ್ಮ ಪರ್ವದ ಪೂಜೆ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ವಿವಿಧ ಕಾರ್ಯಕ್ರಮಗಳು ಜರಗಿದವು. ದಶಲಕ್ಷಣ ಮಹಾಪರ್ವ ಹತ್ತು ದಿನಗಳಲ್ಲಿ ಕ್ರಮವಾಗಿ ಉತ್ತಮ ಕ್ಷಮ, ಉತ್ತಮ ಮಾರ್ಧವ, ಉತ್ತಮ ಆರ್ಜವ, ಉತ್ತಮ ಶೌಚಧರ್ಮ ಮತ್ತು ಸತ್ಯ ಧರ್ಮ, ಉತ್ತಮ ಸಂಯಮ ಧರ್ಮ, ಉತ್ತಮ ತ್ಯಾಗ ಧರ್ಮ, ಉತ್ತಮ ಅಂಕಿಚನ್ಯ, ಉತ್ತಮ ಬ್ರಹ್ಮಚರ್ಯ ಮತ್ತು ಕ್ಷಮಾವಳಿ ಎಂಬ ವಿಷಯಗಳಿರುತ್ತವೆ.
ಸರ್ವಮಂಗಳ ಜೈನ ಮಹಿಳಾ ಸಂಘ(ರಿ). ಮೂಡಬಿದ್ರಿ ಜೈನ್ ಮಿಲನ್ ಮತ್ತು ಮಹಾವೀರ ಸಂಘ(ರಿ) ಮೂಡಬಿದ್ರಿ ಇವರ ಸಂಯುಕ್ತ ಆಶ್ರಯದಲ್ಲಿ ದಶ ಲಕ್ಷಣ ಮಹಾಪರ್ವಾಚಾರಣೆಯು ವಿಜೃಂಭಣೆಯಿಂದ ಜರಗಿತು.
ಒಂಬತ್ತನೇ ದಿನ ಪ್ರೊ.ಅಕ್ಷಯ ಕುಮಾರ್ ಮಳಲಿ ಯವರು ಉತ್ತಮ ಆಕಿಂಚಿನ್ಯ ಧರ್ಮದ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿದರು.ಸರ್ವಮಂಗಳ ಮಹಿಳಾ ಸಂಘದ ಅಧ್ಯಕ್ಷರಾದ ಮಂಜುಳಾ ಯಶೋಧರ, ಸಭಾ ಕರ್ತೃನಿರಂಜನ್ ಕುಮಾರ್ ಶೆಟ್ಟಿ, ಮೂಡಬಿದ್ರಿಜೈನ್ ಮಿಲನ್ ಕಾರ್ಯದರ್ಶಿ ರಾಜೇಶ್ ಜೈನ್, ಹಿರಿಯರಾದ ವಾರಿಸೇನ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ವೇತಾಪ್ರವೀಣಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು,
ಆರತಿ ಮಹಾವೀರ ರವರು ವಂದನಾರ್ಪಣೆ ಗೈದರು.