ಕುಪ್ಪೆಪದವು: ನಾರಾಯಣ ಗುರುಗಳು ಎಲ್ಲಾ ಧರ್ಮ, ಜಾತಿಗೆ ಸೇರಿದವರು: ಭರತ್ ಶೆಟ್ಟಿ

ಕುಪ್ಪೆಪದವು: ನಮ್ಮಲ್ಲಿ ದುಷ್ಟತನ, ಅನ್ಯಾಯ ಮಾಡುವ ಮನೋಭಾವ ಉಂಟಾದಾಗ, ಹಿಂದೂ ಸಮಾಜಕ್ಕೆ ಇಂತಹ ಕೆಟ್ಟ ಕಾರ್ಮೋಡ ಕವಿದಾಗ, ಸಮಾಜವನ್ನು ಉದ್ದರಿಸಲು ಒಬ್ಬ ದಾರ್ಶಣಿಕ ಹುಟ್ಟಿಬರುತ್ತಾನೆ. ಅದೇ ರೀತಿ 170 ವರ್ಷಗಳ ಹಿಂದೆ ಅಸಮಾನತೆ, ಅಸ್ಪೃಶ್ಯತೆ ತಾಂಡವ ಆಡುತ್ತಿದ್ದಾಗ ಹುಟ್ಟಿ ಬಂದ ದಾರ್ಶಣಿಕ ಬ್ರಹ್ಮ ಶ್ರೀ ನಾರಾಯಣ ಗುರುಗಳು. ರಾಕ್ಷಸತ್ವದ ಅಸಮಾನತೆಯನ್ನು ಆಲಿಸಿ ಹಾಕಿ, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ದೇವರನ್ನು ಆರಾಧಿಸುವ ಅವಕಾಶ ಮಾಡಿಕೊಟ್ಟ ಗುರುಗಳು ಯಾವುದೇ ಒಂದು ಧರ್ಮ ಅಥವಾ ಜಾತಿಗೆ ಸೀಮಿತವಾದ ಗುರುಗಳಲ್ಲ. ಪ್ರಪಂಚದ ಎಲ್ಲಾ ಧರ್ಮ, ಜಾತಿಗಳಿಗೆ ಸೇರಿದ, ಜ್ಞಾನದ ಮೂಲಕ ಅಜ್ಞಾನವನ್ನು ಅಳಿಸಿ ಹಾಕಿದ ಮಹಾನ್ ಗುರುಗಳು ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹೇಳಿದ್ದಾರೆ.
ಅವರು ಶ್ರೀ ನಾರಾಯಣ ಗುರು ಸೇವಾ ಸಮಿತಿ(ರಿ) ಕುಪ್ಪೆಪದವು, ನಾರಾಯಣ ಗುರು ಬಿಲ್ಲವ ಯುವ ವೇದಿಕೆ ಮತ್ತು ನಾರಾಯಣ ಗುರು ಮಹಿಳಾ ವೇದಿಕೆ ಇವರ ವತಿಯಿಂದ, ಬ್ರಹ್ಮಶ್ರೀ ಗುರುನಗರದ ನಾರಾಯಣ ಗುರು ಸಮುದಾಯ ಭವನದಲ್ಲಿ ಭಾನುವಾರ (ಆ.25) ನಡೆದ 170ನೇ ಜನ್ಮ ದಿನಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ವೇಳೆ ಕುದ್ರೋಳಿ ಗೋಕರ್ಣನಾಥೆಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ, ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ ಎಂದ ನಾರಾಯಣ ಗುರುಗಳು ಶೋಷಿತರ ಧ್ವನಿಯಾಗಿ, ಸಮಸ್ತ ಹಿಂದುಳಿದ ವರ್ಗವನ್ನು, ಸಂಘರ್ಷ ರಹಿತವಾದ ಕ್ರಾಂತಿಯಿಂದ ಅಸ್ಪೃಶ್ಯತೆಯಿಂದ ಮೇಲೆತ್ತಿದ ಮಹಾನ್ ಮಾನವತಾವಾದಿಗಳು. ಯುದ್ಧ ಅಥವಾ ಯಾವುದೇ ದೊಂಬಿ, ಗಲಾಟೆ ಇಲ್ಲದೇ ಇಂತಹ ಒಂದು ಶಾಂತಿಯಿಂದ ಕ್ರಾಂತಿ ಮಾಡುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿ, ಶೋಷಿತ ಸಮಾಜ ದೇವಸ್ಥಾನದೊಳಗೆ ಪ್ರವೇಶಿಸುವ ಅವಕಾಶ ಮಾಡಿಕೊಟ್ಟ ಸಂತ ನಾರಾಯಣಗುರುಗಳು. ಇವರನ್ನು ಯಾರೇ ಅಗಲೀ ರಾಜಕೀಯಕ್ಕೆ ಬಳಸಬಾರದು ಎಂದರು.
ಇನ್ನು ಈ ಕಾರ್ಯಕ್ರಮದಲ್ಲಿ ಎಡಪದವು ವ್ಯ.ಸೇ.ಸ.ಸಂಘದ ಅಧ್ಯಕ್ಷ, ನಾರಾಯಣ ಗುರು ಸೇವಾ ಸಮಿತಿಯ ಗೌರವಾಧ್ಯಕ್ಷ ನೀಲಯ ಎಂ. ಅಗರಿ, ಶತಾಯುಷಿ ಶ್ರೀಮತಿ ಸೀತು ಪೂಜಾರ್ತಿ, ಹಿರಿಯ ಕೃಷಿಕ ನಾರಾಯಣ ಪೂಜಾರಿ ಐನ, ಕಟೀಲು ಮೇಳದ ಹಿರಿಯ ಯಕ್ಷಗಾನ ಕಲಾವಿದ ಸುರೇಶ ಬಳ್ಳಿ ಮತ್ತು ಸೇವಾ ಸಮಿತಿಯ ಗೌರವಾಧ್ಯಕ್ಷ ನೀಲಯ ಎಂ. ಅಗರಿ ಅವರುಗಳನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಸಮಾಜದ 50 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು. ವೇದಿಕೆಯಲ್ಲಿ ಮಂಗಳೂರು ಶ್ರೀನಿವಾಸ್ ಆಸ್ಪತ್ರೆಯ ಡೀನ್ ಡಾ. ಎಂ. ಶಶಿಧರ್ ಕೋಟ್ಯಾನ್, ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ, ಜಿಲ್ಲಾ ಯೂತ್ ಕಾಂಗ್ರೇಸ್ ಉಪಾಧ್ಯಕ್ಷ ಗಿರೀಶ್ ಆಳ್ವ ಕಾರ್ಯಕ್ರಮದಲ್ಲಿ ಮಾತನಾಡಿದರು. ಇನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಸಾಲ್ಯಾನ್ ಕಾರ್ಯಕ್ರಮದ ಅಧ್ಯಕ್ಷಿಯ ಮಾತುಗಳಾಡಿದರು.

ಮುತ್ತೂರು ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಷ್ಮಾ, ಸದಸ್ಯರುಗಳಾದ ಸತೀಶ್ ಪೂಜಾರಿ ಬಳ್ಳಾಜೆ, ಶ್ರೀಮತಿ ಮಾಲತಿ, ಶ್ರೀಮತಿ ಶಶಿಕಲಾ, ಗಜಾನನ ಕನ್ಷ್ಟ್ರಕ್ಷನ್ ಕುಪ್ಪೆಪದವು ಇದರ ಜಗದೀಶ್ ಕುಲಾಲ್ ಪಾಕಜೆ, ನಾರಾಯಣ ಗುರು ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಜಯಂತಿ ಅಟ್ಟೆಪದವು, ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಶೇಖರ್ ನೇಲ್ಲಚ್ಚಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾರಾಯಣ ಗುರು ಸೇವಾ ಸಮಿತಿ, ಬಿಲ್ಲವ ಯುವ ವೇದಿಕೆ ಮತ್ತು ಮಹಿಳಾ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಸೇವಾ ಸಮಿತಿಯ ಕಾರ್ಯದರ್ಶಿ ರಘು ಎಂ ಅಗರಿ ವರದಿ ವಾಚಿಸಿದರು.
ಕಾರ್ಯಕ್ರಮದಲ್ಲಿ ವಿಶ್ವನಾಥ ಪಂಜ ದೇವರನ್ನು ಪ್ರಾರ್ಥಿಸಿ, ಚಂದ್ರಶೇಖರ ತುಂಬೆಮಜಲು, ಯಶವಂತ ಅಗರಿ, ಲೋಕೇಶ್ ಚಂದ್ರಮಜಲು ಸಮ್ಮಾನ ಪತ್ರ ವಾಚಿಸಿದರು. ಸತೀಶ್ ಬಳ್ಳಾಜೆ ಸ್ವಾಗತಿಸಿ, ಯಶವಂತ್ ಎಂ. ನಿರೂಪಿಸಿ, ಮಹಾಬಲ ಸಾಲ್ಯಾನ್ ವಂದಿಸಿದರು. ಇದಕ್ಕೂ ಮುನ್ನ ಬೆಳಿಗ್ಗೆ 7:30 ಕ್ಕೆ ಗಣಹೋಮ, ಭಜನಾ ಸಂಕೀರ್ತನೆ ನಡೆದು 11 ಗಂಟೆಗೆ ಪ್ರದೀಪ್ ಶಾಂತಿ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳಿಗೆ ಮಹಾಪೂಜೆ ನಡೆಯಿತು.