ಕಡೇಶಿವಾಲಯ ಸರಕಾರಿ ಪ್ರೌಢ ಶಾಲೆಯಲ್ಲಿ ‘ ಯಕ್ಷ ಶಿಕ್ಷಣ’ ಉದ್ಘಾಟನಾ ಸಮಾರಂಭ
ಬಂಟ್ವಾಳ: ಯಕ್ಷಗಾನ ಕಲೆ ನಮ್ಮಲ್ಲಿ ನೈತಿಕತೆ ಮತ್ತು ಬೌದ್ಧಿಕ ಮಟ್ಟವನ್ನು ಹೆಚ್ಚಿಸಿ ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದರು, ಪಟ್ಲ ಫೌಂಡೇಶನ್, ಸರಪಾಡಿ ಘಟಕದ ಸಂಚಾಲಕರಾದ ಸರಪಾಡಿ ಅಶೋಕ ಶೆಟ್ಟಿ ಯವರು ಹೇಳಿದರು.
ಬಂಟ್ವಾಳ ತಾಲೂಕಿನ ಕಡೇಶಿವಾಲಯ ಸರಕಾರಿ ಪ್ರೌಢಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಆಶ್ರಯದಲ್ಲಿ ನಡೆಯುವ “ಯಕ್ಷಧ್ರುವ ಯಕ್ಷ ಶಿಕ್ಷಣ ತರಬೇತಿ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಯಕ್ಷಗಾನ ಕಲಿಯುವಿಕೆ ಆರಂಭ ಶೂರತನವಾಗದೆ, ನಿರಂತರವಾಗಿರಬೇಕು. ಆ ಮೂಲಕ ಮುಂದೆ ಪ್ರಬುದ್ಧ ಕಲಾವಿದರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಆಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಯಕ್ಷಗಾನ ಗುರು ಸತೀಶ್ ಆಚಾರ್ಯ ಮಾಣಿ ಮಾತನಾಡಿ, ಪಟ್ಲ ಫೌಂಡೇಶನ್ ನ ವತಿಯಿಂದ ನಡೆಯುವ ಈ ಉಚಿತ ಯಕ್ಷ ಶಿಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷರಾದ ಶ್ರೀ ತಿರುಮಲೇಶ್ವರ ಭಟ್ ಸಭಾಧ್ಯಕ್ಷತೆ ವಹಿಸಿದ್ದರು.
ಕಡೇಶಿವಾಲಯ ರೋಟರಿ ಗ್ರಾಮೀಣ ದಳದ ಅಧ್ಯಕ್ಷ ಕಿಶೋರ್ ಕುಮಾರ್, ಶಾಲಾ ಎಸ್.ಡಿ.ಎಂ.ಸಿ. ಸದಸ್ಯರಾದ ಲೋಕನಾಥ ತಿಮರಾಜೆ, ಕಮಲಾಕ್ಷ ಪೂಜಾರಿ ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕ ಲೋಕಾನಂದ ಎನ್. ಸ್ವಾಗತಿಸಿದರು, ಸಹಶಿಕ್ಷಕಿ ಗೀತಾ ಕುಮಾರಿ ವಂದಿಸಿದರು.
ಸಹಶಿಕ್ಷಕಿ ವಸಂತಿ.ಎಲ್ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಶಿಕ್ಷಕವೃಂದದವರು ಸಹಕರಿಸಿದರು.