ಕುಟುಂಬ ರೂಪದ ಪ್ರೀತಿ ಬಾಂಧವ್ಯ ಮಮತೆ ಇದ್ದರೆ ಶಾಲೆಗಳ ಅಭಿವೃದ್ಧಿ : ಶಿಕ್ಷಣಾಧಿಕಾರಿ ಮಂಜುನಾಥನ್ ಎಂ ಜಿ
ಬಂಟ್ವಾಳ: ಪೋಷಕರ ಒಡನಾಟ, ಕುಟುಂಬ ರೂಪದ ಪ್ರೀತಿ,ಬಾಂಧವ್ಯ,ಮಮತೆ ಇದ್ದರೆ ಶಾಲೆಗಳು ಯಾವ ರೀತಿ ಅಭಿವೃದ್ಧಿ ಹೊಂದುತ್ತವೆ ಎಂಬುದಕ್ಕೆ ಏಮಾಜೆ ಶಾಲೆ ಮಾದರಿಯಾಗಿದೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ ಹೇಳಿದರು. ಬಂಟ್ವಾಳ ತಾಲೂಕು ನೆಟ್ಲ ಮೂಡ್ನೂರು ಗ್ರಾಮದ ಏಮಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನೂತನವಾಗಿ ಪ್ರಾರಂಭವಾದ ಪೂರ್ವ ಪ್ರಾಥಮಿಕ ( ಎಲ್ ಕೆ ಜಿ ಮತ್ತು ಯು ಕೆ ಜಿ )ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂದರ್ಭ ಶಾಲೆಯಲ್ಲಿ ಅಕ್ಷರ ದಾಸೋಹಕ್ಕೆ ಸಂಬಂಧ ಪಟ್ಟ “ಅಕ್ಷಯ ಪಾತ್ರೆ” ಕಾರ್ಯಕ್ರಮವಾಗಿ ಕಳಸೆಗೆ ಅಕ್ಕಿ ತುಂಬಿಸಿದ ಅವರು, ತನ್ನ ಸ್ವಂತಧನ ಸಮರ್ಪಿಸಿದರು.ತಾಲೂಕಿನ ಎಲ್ಲಾ ಗ್ರಾಮೀಣ ಭಾಗದ ಶಾಲೆಗಳಿಗೂ ಶೀಘ್ರವಾಗಿ ಭೇಟಿ ನಿಒಡಿ ಶಾಲೆಗಳ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿ, ಶಾಲೆಗಳಿಗೆ ಇಲಾಖಾ ಮಟ್ಟದಲ್ಲಿ ದೊರೆಯುವ ಸೌಲಭ್ಯವನ್ನು ಒದಗಿಸಲಾಗುವುದು ಎಂದರು.

ಇದೇ ವೇಳೆ 2024-2025 ನೇ ಸಾಲಿನ ಶಾಲಾ ಮಂತ್ರಿಮಂಡಲಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಯವರು ಅಧಿಕಾರ ಹಸ್ತಾಂತರಿಸಿ ಪ್ರಮಾಣವಚನ ಬೋಧಿಸಿದರು. ದಾನಿಗಳು ಕೊಡುಗೆಯಾಗಿ ನೀಡಿದ ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕ, ಶಾಲಾ ಸಮವಸ್ತ್ರ, ಬೆಲ್ಟ್, ಟೈ, ಗುರುತಿನ ಕಾರ್ಡುಗಳನ್ನು ವಿತರಿಸಲಾಯಿತು.

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಶಾಲೆಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ರಮೇಶ್ ಶಾಲಾ ಆವರಣದಲ್ಲಿ ಗಿಡವನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಲ್ಲಿಕಾ, ಉಪಾಧ್ಯಕ್ಷರಾದ ಪ್ರಸಾದ್ ಆಚಾರ್ಯ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಮಿತ ಡಿ. ಪೂಜಾರಿ, ಸದಸ್ಯರಾದ ಧನಂಜಯ ಗೌಡ, ಶಾಲಾ ಗೌರವಾಧ್ಯಕ್ಷರಾದ ಜಯರಾಮ್ ರೈ, ನಿವೃತ್ತ ಪ್ರಾಂಶುಪಾಲರಾದ ಪ್ರೇಮಲತಾ ರೈ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮುರಳೀಧರ ಶೆಟ್ಟಿ, ಮಕ್ಕಳ ಪೋಷಕರು,ವಿದ್ಯಾಭಿಮಾನಿಗಳು, ವಿದ್ಯಾರ್ಥಿಗಳು,ಶಿಕ್ಷಕರು, ಅಕ್ಷರದಾಸೋಹ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಡಾ ತ್ರಿವೇಣಿ ರಮೇಶ್ ಸ್ವಾಗತಿಸಿ, , ಸಹ ಶಿಕ್ಷಕ ಉದಯ ಚಂದ್ರ ವಂದಿಸಿದರು, ಗೌರವ ಶಿಕ್ಷಕಿ ಅಕ್ಷತಾ ಕೆ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ದೀಕ್ಷಾ ಸಹಕರಿಸಿದರು.