ಶ್ರೀ ಕ್ಷೇತ್ರ ಪೊಳಲಿಯ ವಿಶೇಷ ಒಂದು ಮಾಸದ ಜಾತ್ರಾ ಮಹೋತ್ಸವ
ಪೊಳಲಿ: ಪ್ರತೀ ಮಾರ್ಚ್ ತಿಂಗಳ ಸಂಕ್ರಮಣದಂದು ಧ್ವಜಾರೋಹಣ ಆರಂಭವಾಗುತ್ತದೆ. ಈ ಬಾರಿ ಮಾರ್ಚ್ 14ರ ಸಂಕ್ರಮಣದಂದು ಪೊಳಲಿಯಲ್ಲಿ ದ್ವಜಾರೋಹಣ ಆರಂಭಗೊಳ್ಳುವುದು.

14ರ ಸಂಕ್ರಮಣದಂದು ಸಂಜೆ ಉಳಿಪಾಡಿಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸಿದ ಬಳಿಕ ಪೊಳಲಿಯಲ್ಲಿ ಒಂದು ತಿಂಗಳ ಅವಧಿಯ ಜಾತ್ರೆ ಇರುವುದು ಸಾಮಾನ್ಯ ಜನರಿಗೆ ತಿಳಿದ ವಿಷಯ ಆದರೆ ಎಷ್ಟು ದಿನಗಳ ಜಾತ್ರೆ ಇದೆ ಎಂಬುವುದು ಯಾರಿಗೂ ತಿಳಿಯುವುದಿಲ್ಲ ಇದೇ ಇಲ್ಲಿಯ ವಿಶೇಷತೆ.

ಒಟ್ಟು ಎಷ್ಟು ದಿನಗಳ ಜಾತ್ರೆ ಇರಬಹುದೆಂದು ಎಲ್ಲರೂ ಗೋಪುರದಲ್ಲಿ 15ರಂದು ಬೆಳಗ್ಗೆ ಕಂಚಿಲು(ಕಂಚುಬೆಳಕು) ಸೇವೆ ನಡೆದ ಬಳಿಕ ಅಲ್ಲಿ ಎಷ್ಟು ದಿನದ ಜಾತ್ರೆ ಇದೆ ಎಂದು ತಿಳಿಯಲು ಸಾವಿರ ಸೀಮೆಯ ಭಕ್ತಾದಿಗಳು ಕಾಯುತ್ತಿರುತ್ತಾರೆ.
ಕುದಿ ಕರೆಯುವ ಮುನ್ನಾದಿನ ಪೊಳಲಿಗೆ ಸಂಬಂಧಪಟ್ಟ ಅಡ್ಡೂರಿನ ನಂದ್ಯ ಕ್ಷೇತ್ರದಿಂದ ಭಗವತಿ ದೇವಿಯ ಮೊಗಮೂರ್ತಿ ಹಾಗೂ ಅರಸು ದೈವದ ಆಯುಧಗಳೊಂದಿಗೆ ನಂದ್ಯ ಮನೆತನದ ಗುರಿಕಾರ ಹಾಗೂ ನಂದ್ಯ ಮನೆತನದವರು ತೂಟೆಧಾರದೊಂದಿಗೆ ದೇವಸ್ಥಾನಕ್ಕೆ ಬಂದ ಬಳಿಕ ಅವರನ್ನು ಪೊಳಲಿಯ ಆಡಳಿತ ಮಂಡಳಿ ವಿಶೇಷ ರೀತಿಯಲ್ಲಿ ಬರಮಾಡಿಸಿಕೊಳ್ಳುತ್ತಾರೆ.

ಅಲ್ಲಿಂದ ಪೊಳಲಿ ದೇವಸ್ಥಾನಕ್ಕೆ ಒಂದು ಸುತ್ತು ಬರಲಾಗುತ್ತದೆ. ಭಂಡಾರದ ಮನೆಯವರಿಗೆ ದೇವರ ಧ್ವಜಸ್ತಂಭದ ಎದುರಿನ ಗೋಪುರದಲ್ಲಿ ಸ್ಥಳಾವಕಾಶ ನೀಡಲಾಗುತ್ತದೆ, ಅಲ್ಲಿಂದ ದೇವರನ್ನು ಭೇಟಿ ಮಾಡಿ ಅರಸು ದೈವದ ಆಯುಧ ಹಾಗೂ ಭಗವತಿಯ ದೇವಿಯ ಮೊಗವನ್ನು ಪೊಳಲಿ ದೇವಳದ ಎದುರು ಭಾಗದ ಗೋಪುರದಲ್ಲಿ ಇಡಲಾಗುತ್ತದೆ.

ಮರುದಿನ ಬೆಳಗ್ಗೆ ಆರಡ ಕರೆಯುವ ಮುನ್ನ ಕಂಚಿಲ್ ಬಲಿ ಸೇವೆ ನಡೆದ ನಂತರ ನಂದ್ಯ ಮನೆತನದ ಗುರಿಕಾರ ದೇವಸ್ಥಾನದ ಮುಂಭಾಗದ ಪ್ರಮಾಣ ಬಾವಿಯತ್ತ ಆಗಮಿಸಿ ಅಲ್ಲಿ ಒಂದು ಸುತ್ತು ಬರಲಾಗುತ್ತದೆ. ಅಲ್ಲಿಂದ ಭಗವತಿ ದೇವಿಯ ಮೊಗವನ್ನು ನಂದ್ಯ ಮನೆತನದ ಗುರಿಕಾರ ಏರಿಸಿ ಮೂರು ಸುತ್ತು ತಿರುಗಿಸುತ್ತಾರೆ. ಇದನ್ನು ಕದ್ರ್ ಮುಡಿ ಏರಿಸುವುದು ಎನ್ನುತ್ತಾರೆ. ಕದ್ರ್ ಮುಡಿ ಏರಿದ ನಂತರವೇ ಆರಡ ಕರೆಯುವ ಪ್ರಕ್ರಿಯೆ ಆರಂಭವಾಗುತ್ತದೆ.
ಹಿಂದಿನ ದಿನ ನಟ್ಟೋಜ ಮನೆತನದವರು ಪುತ್ತಿಗೆ ಸೋಮನಾಥ ದೇವಸ್ಥಾನಕ್ಕೆ ಹೋಗಿ ಹಿಂಗಾರದ ಹಾಳೆಯೊಂದಿಗೆ ಆಗಮಿಸಿ ತಂದ ಹಿಂಗಾರವನ್ನು ದುರ್ಗಾ ದೇವಸ್ಥಾನದ ಗುಡಿಯ ಹಿಂಭಾಗದಲ್ಲಿ ಇರುವ ಶೇರಿಗಾರ (ವಾಲಗ ಊದುವವರ) ಕೈಯಲ್ಲಿ ಕೊಟ್ಟು ಆತನ ಕಿವಿಯಲ್ಲಿ ಆರಡದ ದಿನವನ್ನು ತಿಳಿಸುತ್ತಾರೆ ನಂತರ ದೇವಸ್ಥಾನಕ್ಕೆ ಸಂಬಂಧಪಟ್ಟ ಶೇರಿಗಾರನು ಗೋಪುರದಲ್ಲಿ ಭಗವತಿ ದೇವಿಯ ಮೊಗಮೂರ್ತಿ ಹಾಗೂ ಅರಸು ದೈವಗಳ ಆಯುಧಗಳನ್ನು ತಿರುಗಿಸುವ ಪಂಬದ(ದೈವಪಾತ್ರಿ) ತಿಳಿಸುತ್ತಾರೆ.
ಈ ಘಟನೆ ನಡೆಯುವಾಗ ಸಾವಿರಾರು ಭಕ್ತರು ಗೋಪುರದ ಎದುರಲ್ಲಿ ಜಾತ್ರೆಯ ದಿನವನ್ನು ತಿಳಿಯಲು ಆತುರರಾಗಿರುತ್ತಾರೆ.
ಭಗವತಿ ದೇವಿಯ ಮೊಗಮೂರ್ತಿ ಹಾಗೂ ಅರಸು ದೈವಗಳ ಆಯುಧದೊಂದಿಗೆ ಆಗಮಿಸಿದ ದೈವದ ವೇಷ ಭೂಷಣದಲ್ಲಿರುವ ನರ್ತನ ಮಾಡಲಿರುವ ದೈವ ಪಾತ್ರಿಯ ಕೈಯಲ್ಲಿ ಹಿಂಗಾರದ ಹಾಳೆಯನ್ನು ಕೊಟ್ಟು ಕಿವಿಯಲ್ಲಿ ಆರಡದ ದಿನವನ್ನು ಉಸುರುತ್ತಾರೆ ಇದನ್ನು ವೇಷ ಹಾಕಿದ ಪಂಬದನು(ದೈವಪಾತ್ರಿ) ಡಂಗುರ ಕರೆಯುವ ರೀತಿಯಲ್ಲಿ ಜೋರಾಗಿ ಆರಡ ಕರೆಯುತ್ತಾ ಸಾಗುತ್ತಾನೆ ತುಳು ಭಾಷೆಯಲ್ಲಿ ಇಷ್ಟೇ ದಿನದ ಜಾತ್ರೆ ಎಂದು ತಿಳಿಸುತ್ತಾರೆ ಇದನ್ನು ಕುದಿ ಕರೆಯುವುದು(ಕುದಿ ಲೆಪ್ಪುನಿ) ಎಂದು ಕರೆಯುತ್ತಾರೆ. ಆಗ ಎಲ್ಲರಿಗೂ ಜಾತ್ರಾ ಅವಧಿ ತಿಳಿಯುತ್ತದೆ.