ಜೆಡಿಎಸ್ ತೆನೆಹೊತ್ತ `ಮಹಿಳೆ’ಮಾಜಿ ಸಚಿವರ ಪುತ್ರಿ ಜೆಡಿಎಸ್ ಅಭ್ಯರ್ಥಿ
ಮೂಡುಬಿದಿರೆ:ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅವರ ಪುತ್ರಿ, ವೈದ್ಯೆ ಅಮರಶ್ರೀ ಅಮರನಾಥ ಶೆಟ್ಟಿ ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕಳೆದ 52 ವರ್ಷಗಳಲ್ಲಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ವಿಧಾನಸಭೆಗೆ ಸ್ಪರ್ಧಿಸಿದಂತಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಅಮರಶ್ರೀ, ಶುದ್ಧ ಕುಡಿಯುವ ನೀರು, ಶಿಕ್ಷಣ, ಉದ್ಯೋಗ, ಮಹಿಳಾ ಸಬಲೀಕರಣ, ಆರೋಗ್ಯ, ಪ್ರವಾಸೋದ್ಯಮ ಸಹಿತ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಮನೆ ಮನೆಗೆ ತೆರಳಿ ಜೆಡಿಎಸ್ ಪಕ್ಷ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದೇನೆ. ಮುಂದಿನ ಐದು ವರುಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಯ ದೂರದೃಷ್ಟೀ ಚಿಂತನೆಯ ರೂಪುರೇಶೆಗಳನ್ನು ಸಿದ್ಧಪಡಿಸಿದ್ದು, ಆ ಪ್ರಕಾರವಾಗಿಯೇ ನಡೆಯುವುದಾಗಿ ಹೇಳಿದರು.
ಕಳೆದ ಮೂವತ್ತು ವರುಷಗಳಲ್ಲಿ ಕ್ಷೇತ್ರವ್ಯಾಪ್ತಿಯಲ್ಲಿ ಅನೇಕ ಸಮಸ್ಯೆಗಳು ಸಮಸ್ಯೆಗಳಾಗಿಯೆ ಉಳಿದುಕೊಂಡಿದೆ. ಆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವ ರಾಜಕೀಯ ಪಕ್ಷಗಳೂ ಚಿಂತಿಸದಿರುವುದು ದುರಂತವೇ ಸರಿ ಎಂದ ಅಮರಶ್ರೀಯವರು, ನಾಲ್ಕು ತಿಂಗಳುಗಳಿಂದ ಮುಲ್ಕಿ ಕ್ಷೇತ್ರದ ಮತದಾರರ ಮನೆಮನೆಗೆ ತೆರಳಿ ಸಮಸ್ಯೆಯನ್ನರಿಯುತ್ತಿದ್ದೇನೆ. ಜನಪರ ಕೆಲಸ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಳ್ಳುತ್ತಿದ್ದೇನೆ ಎಂದರು.
ಮೊದಲ ಚುನಾವಣೆ:
ರಾಜಕೀಯ ಜೀವನದಲ್ಲಿ ಇದು ಮೊದಲ ಚುನಾವಣೆಯಾಗಿದೆ. ತಂದೆ ಅಮರನಾಥ ಶೆಟ್ಟಿಯವರ ರಾಜಕಾರಣವನ್ನು ಬಾಲ್ಯದಿಂದಲೇ ಕಂಡವಳು. ಅವರ ಮೃದು ಸ್ವಭಾವ, ಶುದ್ಧ ರಾಜಕಾರಣ, ರಾಜಕಾರಣದಲ್ಲಿ ನೆಲೆ ನಿಂತಿದ್ದು ಅದೇ ಗುಣ ಸ್ವಭಾವಗಳನ್ನು ಮೈಗೂಢಿಸಿಕೊಂಡಿದ್ದೇನೆ. ವೈದ್ಯಕೀಯ ವೃತ್ತಿಯೊಂದಿಗೆ ಕ್ಷೇತ್ರದ ಜನರ ಸೇವೆಗಾಗಿ ಶ್ರಮಿಸುವುದಾಗಿ ಅಮರಶ್ರೀ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುಮಾರ ಸ್ವಾಮಿಯವರ ಪಂಚರತ್ನ ಯೋಜನೆ, ಕಳೆದ ಬಾರಿ ರೈತರಿಗೆ ನೀಡಲಾದ 25ಸಾವಿರ ಕೋಟಿ ಕೃಷಿಸಾಲ, ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳ ಪಟ್ಟಿಯೊಂದಿಗೆ ಮನೆ ಮನೆಗೆ ಕರ್ಯಕರ್ತರೊಂದಿಗೆ ತೆರಳಿ ತಿಳಿಸುತ್ತಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಆಸಿಫ್, ಹಿರಿಯ ಕಾರ್ಯಕರ್ತ ಹರಿಪ್ರಸಾದ್ ಶೆಟ್ಟಿ, ಶಿವದತ್ತ್ ಕೆ.ಬಿ ಉಪಸ್ಥಿತರಿದ್ದರು.