ಭೋಪಾಲ್: ಕಳ್ಳನೊಬ್ಬ (Thief) ಜೈನ ದೇವಾಲಯದಿಂದ (Temple) ಕದ್ದ ಎಲ್ಲಾ ವಸ್ತುಗಳನ್ನು ಹಿಂದಿರುಗಿಸಿ, ಕ್ಷಮಾಪಣೆಯ ಚೀಟಿಯನ್ನು ಇಟ್ಟು ಹೋಗಿರುವ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.

ಅಕ್ಟೋಬರ್ 24 ರಂದು ಬಾಲಾಘಾಟ್ ಪಟ್ಟಣದ ಲಮ್ಟಾ ಪ್ರದೇಶದಲ್ಲಿ ಕಳ್ಳತನ ನಡೆದಿತ್ತು. ದೇವಾಲಯದ ಹಲವಾರು ಬೆಲೆಬಾಳುವ ವಸ್ತುಗಳು ಕಾಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ (Police) ಮಾಹಿತಿ ನೀಡಿದ್ದು, ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದರು. ಆದರೆ ಯಾವುದೇ ಮಾಹಿತಿ ದೊರೆತಿರಲಿಲ್ಲ. ಆದರೆ ನಾಲ್ಕು ದಿನಗಳ ನಂತರ ದೇವಾಲಯದ ಬಳಿಯ ಹೊಂಡದಲ್ಲಿ ಬೆಲೆಬಾಳುವ ವಸ್ತುಗಳನ್ನು ಸುತ್ತಿಟ್ಟಿರುವ ಬ್ಯಾಗ್ವೊಂದು ಅಲ್ಲಿನ ಸ್ಥಳೀಯರಿಗೆ ಕಂಡಿದೆ.
ಇದನ್ನು ತೆರೆದಾಗ ಬ್ಯಾಗ್ನಲ್ಲಿ ಒಂದು ಲೆಟರ್ ಇದ್ದು, ಅದರಲ್ಲಿ ನಾನು ಕಳ್ಳತನ ಮಾಡಿದ ನಂತರ ತುಂಬಾ ನೋವು ಅನುಭವಿಸಿದೆ. ಇದರಿಂದಾಗಿ ವಸ್ತುಗಳನ್ನು ಹಿಂದಿರುಗಿಸುತ್ತೇನೆ, ಜೊತೆಗೆ ಈ ವಸ್ತುಗಳನ್ನು ಕದ್ದಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಕಳ್ಳ ಬರೆದಿದ್ದಾನೆ.
ಘಟನೆಗೆ ಸಂಬಂಧಿಸಿ ಈ ಎಲ್ಲಾ ವಸ್ತುಗಳನ್ನು ದೇವಾಲಯದ ಅಧಿಕಾರಿಗಳಿಗೆ ವಾಪಸ್ ಹಸ್ತಾಂತರಿಸಿದ್ದಾರೆ.
