ಬೆಂಗಳೂರು: ಕಾಂಗ್ರೆಸ್ನವರ ಹೋರಾಟದಿಂದ ರಾಜ್ಯದಲ್ಲಿ ಕೋವಿಡ್ ಹೆಚ್ಚಳವಾದರೆ ಅದಕ್ಕೆ ಅವರೇ ಹೊಣೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.

ನಗರದಲ್ಲಿಂದು ಕಾಂಗ್ರೆಸ್ನವರಿಂದ ರಾಜಭವನ ಚಲೋ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ನವರ ಹೋರಾಟದಿಂದ ರಾಜ್ಯದಲ್ಲಿ ಕೋವಿಡ್ ಹೆಚ್ಚಳ ಆದರೆ ಅದಕ್ಕೆ ಅವರೇ ಹೊಣೆ. ಕಾಂಗ್ರೆಸ್ನವರೇ ನೈತಿಕ ಹೊಣೆ ಹೊರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಪ್ರತಿಭಟನೆ ಮಾಡುವುದಾದರೆ ಫ್ರೀಡಂಪಾರ್ಕ್ನಲ್ಲಿ ಮಾಡಲಿ, ಅದು ಬಿಟ್ಟು ಜನರನ್ನು ಸೇರಿಸಿಕೊಂಡು ರಸ್ತೆಯಲ್ಲಿ ಪ್ರತಿಭಟನೆ ಮಾಡೋದು ಸರಿಯಲ್ಲ. ಅವರಿಂದು ರಾಜಭವನ ಚಲೋ ಮಾಡ್ತಿದ್ದಾರೆ. ಇವತ್ತಿನ ಹೋರಾಟಕ್ಕೆ ಕೋವಿಡ್ ಉಲ್ಲಂಘನೆ ಅಡಿ ಕೇಸ್ ದಾಖಲಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದು ವಿವರಿಸಿದ್ದಾರೆ.

ಇದೇ ವೇಳೆ ಶಾಲೆಗಳಲ್ಲಿ ಕೋವಿಡ್ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಒಂದೆರಡು ಶಾಲೆಗಳಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಆ ಶಾಲಾ ಮಕ್ಕಳಿಗೆ ರಜೆ ಕೊಟ್ಟಿದ್ದಾರೆ. ಈಗಾಗಲೇ ಸ್ಪಷ್ಟವಾದ ನಿಯಮಾವಳಿ ರೂಪಿಸಿದ್ದೇವೆ. ವಿದ್ಯಾರ್ಥಿಗಳಿಗೆ ಬರುವಾಗ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಶಾಲೆಗಳಲ್ಲಿ ಎಲ್ಲ ನಿಯಮ ಪಾಲನೆ ಮಾಡ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸತ್ಯ ಹೊರಬರಲಿ: ಕಾಂಗ್ರೆಸ್ ನಾಯಕರ ನಡೆ ನಾಚಿಕೆ ತರಿಸುವಂತಹದ್ದು, ಒಂದು ಕಡೆ ಸಂವಿಧಾನದ ಬಗ್ಗೆ ಸಾಕಷ್ಟು ಭಾಷಣ ಮಾಡ್ತಾರೆ. ಇನ್ನೊಂದು ಕಡೆ ಸಂವಿಧಾನಕ್ಕೆ ಅಗೌರವ ತೋರುವ ಕೆಲಸ ಮಾಡ್ತಾರೆ. ಈ ಹಿಂದೆ ಮಾಜಿ ಪ್ರಧಾನಿ ಪಿ.ವಿ.ನರಂಸಿಹರಾವ್, ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಕೇಸರಿಯವರ ವಿರುದ್ಧವೂ ವಿಚಾರಣೆ ನಡೆದಿತ್ತು. ನಮ್ಮ ಖರ್ಗೆಯವರ ವಿಚಾರಣೆ ಕೂಡ ನಡೆಯಿತು. ಆಗ ಯಾರೂ ಚಕಾರ ಎತ್ತಿಲ್ಲ, ಪ್ರತಿಭಟನೆಗೆ ಮುಂದಾಗಲಿಲ್ಲ. ಕಾಂಗ್ರೆಸ್ ನಾಯಕರು ಮಾಡ್ತಿರೋದು ಸರಿಯಲ್ಲ. ಈ ರೀತಿ ಮಾಡೋದ್ರಿಂದ ತಪ್ಪು ಸಂದೇಶ ಹೋಗ್ತಿದೆ. ಏನೇ ಇದ್ದರೂ ವಿಚಾರಣೆ ಆಗಲಿ, ಸತ್ಯ ಹೊರಗಡೆ ಬರಲಿ ಎಂದು ಒತ್ತಾಯಿಸಿದ್ದಾರೆ.
