ಮಂಡ್ಯ: 2 ವರ್ಷದಿಂದ ಬಗೆಹರಿಯದ ಸಮಸ್ಯೆಯನ್ನು ಬಗೆಹರಿಸುವಂತೆ ಮಂಡ್ಯ ರೈತ ಮುಖಂಡ ಮಾಡಿದ್ದಾರೆ. ಅವರು ಮಾಡಿದ ಒಂದೇ ಒಂದು ಟ್ವೀಟ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಂದಿಸಿ, ಎರಡೇ ದಿನದಲ್ಲಿ ಆ ಸಮಸ್ಯೆಯನ್ನು ಬಗೆಹರಿಸಿದ್ದಾರೆ.

ಮಂಡ್ಯದ ತಂಡಸನಹಳ್ಳಿ ಗ್ರಾಮದ ನೂತನ್ ಹುಟ್ಟುತ್ತಲೇ ಅಂಗವಿಕಲತೆ ಹಾಗೂ ವಿಚಿತ್ರ ಚರ್ಮ ರೋಗಕ್ಕೆ ತುತ್ತಾಗಿದ್ದಾರು. ಆಧಾರ್ ಪದ್ಧತಿಯ ಆರಂಭದಲ್ಲಿ ನೂತನ್ ಅವರ ಭಾವಚಿತ್ರದ ಆಧಾರದ ಮೇಲೆ ಅವರಿಗೆ ಅಧಿಕಾರಿಗಳು ಆಧಾರ್ ಕಾರ್ಡ್ ಮಾಡಿಕೊಟ್ಟಿದ್ದರು. ಕಳೆದ ಎರಡೂವರೆ ವರ್ಷದ ಹಿಂದೆ ಇವರಿಗೆ ಬರುತ್ತಿದ್ದ ಪಿಂಚಣಿ ಹಾಗೂ ಸರ್ಕಾರಿ ಸವಲತ್ತುಗಳು ನಿಂತು ಹೋಗಿದ್ದವು. ಈ ಬಗ್ಗೆ ವಿಚಾರಿಸಿದಾಗ ನಿಮ್ಮ ಆಧಾರ್ ಕಾರ್ಡ್ ಬ್ಲಾಕ್ ಆಗಿದೆ, ನಿಮ್ಮ ಆಧಾರ್ ಕಾರ್ಡ್ನ್ನು ಅಪ್ಡೇಟ್ ಮಾಡಿಸುವಂತೆ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ನೂತನ್ ಹಾಗೂ ಕುಟುಂಬಸ್ಥರು ಆಧಾರ್ ಕಾರ್ಡ್ ಕಚೇರಿಗೆ ಹೋದಾಗ ನಿಮ್ಮ ಥಂಬ್ ತೆಗೆದುಕೊಳ್ಳುತ್ತಿಲ್ಲ, ಇದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನೂತನ್ಗೆ ವಿಚಿತ್ರ ಚರ್ಮ ರೋಗ ಇರುವ ಕಾರಣ ಅವರ ಬೆರಳಚ್ಚು ಹಾಗೂ ಅವರ ಕಣ್ಣಿನ ಗುರುತು ತೆಗೆದುಕೊಳ್ಳುತ್ತಿರಲಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಿಕೊಡಿ ಎಂದು ಇವರು ಎಲ್ಲಾ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿಯನ್ನು ಸಲ್ಲಿಸಿದ್ದರು. 2 ವರ್ಷವಾದರೂ ಯಾರೂ ಸಹ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿರಲಿಲ್ಲ.
ಕಳೆದ 3 ದಿನಗಳ ಹಿಂದೆ ಮಂಡ್ಯ ರೈತ ಮುಖಂಡ ಮಧುಚಂದನ್ ನೂತನ್ ಫೋಟೊವನ್ನು ಹಾಕಿ, ಇವರಿಗೆ ಚರ್ಮ ರೋಗ ಇದೆ, ಆಧಾರ್ ಕಾರ್ಡ್ಗೆ ಬೆರಳಚ್ಚು ಆಗುತ್ತಿಲ್ಲ. ಇದರಿಂದ ಇವರು ಸರ್ಕಾರಿ ಸೌಲಭ್ಯದಿಂದ ವಂಚಿತನಾಗಿದ್ದಾರೆ. ಆಧಾರ್ ಕಾರ್ಡ್ನ್ನು ಹೇಗೆ ಸರಿಪಡಿಸುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿದ್ದರು.
ಈ ಟ್ವೀಟ್ ನೋಡಿದ ಪ್ರಧಾನಿ ಸಚಿವಾಲಯದ ಅಧಿಕಾರಿಗಳು ಅವರು ಈ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ಅಧಿಕಾರಿಗಳು ನೂತನ್ಗೆ ಕರೆ ಮಾಡಿ, ಸಮಸ್ಯೆಗಳನ್ನು ಆಲಿಸಿ ಅವರಿಗೆ ಆಧಾರ್ ಕಾರ್ಡ್ ಅನ್ನುಂ ಅಪ್ಡೇಟ್ ಮಾಡಿ ಅವರ ಮನೆಗೆ 2 ದಿನದಲ್ಲಿ ಕಳುಹಿಸಿದ್ದಾರೆ.
ನೂತನ್ ಅವರು ರೈತ ಮುಖಂಡ ಮಧುಚಂದನ್ ಅವರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೂತನ್ ಮತ್ತು ಅವರ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
