ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಪರಿಶಿಷ್ಟ ಜಾತಿ ಪಂಗಡ ಕುಂದು ಕೊರತೆ ಸಭೆಯಲ್ಲಿ ತಹಶೀಲ್ದಾರ್ ಡಾ.ಸ್ಮಿತಾ ರಾಮು ಮಾತನಾಡಿದರು.
ಇಲ್ಲಿನ ಬಿ.ಸಿ.ರೋಡು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಹಶೀಲ್ದಾರ್ ಡಾ.ಸ್ಮಿತಾ ರಾಮು ಇವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪರಿಶಿಷ್ಟ ಜಾತಿ ಪಂಗಡ ಕುಂದು ಕೊರತೆ ಸಭೆಯಲ್ಲಿ ಯಾವುದೇ ನಿರ್ಣಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಪುರಸಭಾ ಸದಸ್ಯ, ದಲಿತ ಮುಖಂಡ ಜನಾರ್ದನ ಚಂಡ್ತಿಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತೀ ಸಲ ಸಭೆಯಲ್ಲಿ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ಮಾತ್ರ ನಡೆಯುತ್ತಿದೆ. ಈ ಸಭೆಗೆ ಮಾಧ್ಯಮ ಪ್ರತಿನಿಧಿಗಳಿಗೂ ಆಹ್ವಾನ ಇಲ್ಲ ಎಂಬ ಆರೋಪ ಕೆಲವು ಸದಸ್ಯರಿಂದ ಕೇಳಿ ಬಂತು. ಬಿ.ಸಿ.ರೋಡಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಗೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ೧ ರಿಂದ ೧೨ ನೇ ತರಗತಿಗೆ ಪರಿಶಿಷ್ಟ ಜಾತಿ ಪಂಗಡ ವಿದ್ಯಾರ್ಥಿಗಳಿಂದಲೂ ಖಾಸಗಿ ಶಾಲೆಗಳಲ್ಲಿ ಒತ್ತಾಯ ಪೂರ್ವಕವಾಗಿ ಫೀಸು ಸಂಗ್ರಹಿಸಲಾಗುತ್ತಿದೆ. ಬಿ.ಸಿ.ರೋಡು ಆಶ್ರಮ ಶಾಲೆ ಕಟ್ಟಡ ಶಿಥಿಲಗೊಂಡಿದೆ. ಪಂಜಿಕಲ್ಲು ಶಾಲೆಯೊಂದರಲ್ಲಿ ವಿದ್ಯಾರ್ಥಿಗೆ ಹಲ್ಲೆ ನಡೆಸಲಾಗಿದೆ. ಪಂಜಿಕಲ್ಲು ಗ್ರಾಮದ ಹಲವೆಡೆ ಅಕ್ರಮ ಶೇಂದಿ ಮಾರಾಟ, ಕಡೇಶಿವಾಲಯ ಮತ್ತು ಅರಳ ಗ್ರಾಮದ ಗೂಡಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಇಲ್ಲಿನ ವಿವಿಧ ರಸ್ತೆಗಳಲ್ಲಿ ಸಂಚರಿಸುವ ವಾಹನಗಳನ್ನು ತಡೆದು ‘೧೧೨ ಹೈವೇ ಪೊಲೀಸ್ ವಾಹನ’ದಲ್ಲಿ ಪೊಲೀಸರು ವಾಹನ ಸವಾರರಿಂದ ರಶೀದಿ ಇಲ್ಲದೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದರು.
ಪ್ರಮುಖರಾದ ಜನಾರ್ದನ ಬೋಳಂತೂರು, ಸೇಸಪ್ಪ ಬೆದ್ರಕಾಡು, ಗಂಗಾಧರ ಪರಾರಿ, ಸುರೇಶ್ ಅರ್ಬಿ, ಸತೀಶ ಅರಳ, ವಿಶ್ವನಾಥ ಚಂಡ್ತಿಮಾರ್ ಚರ್ಚೆಯಲ್ಲಿ ಪಾಲ್ಗೊಂಡರು. ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ದಿನೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಜಯಶ್ರೀ ಇದ್ದರು.
