ಲಕ್ನೋ: ಹಿಂದಿಯನ್ನು ಇಷ್ಟಪಡದವರು ವಿದೇಶಿಯರೆಂದು ನಾನು ಭಾವಿಸುತ್ತೇನೆ. ಭಾಷೆ ಬಾರದವರು ದೇಶವನ್ನು ಬಿಟ್ಟು ಹೋಗಬಹುದು ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಮೀನುಗಾರಿಕೆ ಸಚಿವ ಸಂಜಯ್ ನಿಶಾದ್ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ.

ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಕನ್ನಡ ನಟ ಕಿಚ್ಚ ಸುದೀಪ್ ಅವರ ಟ್ವೀಟ್ ವಾರ್ ಈಗ ಎಲ್ಲಕಡೆ ದೊಡ್ಡ ಸುದ್ದಿಯಾಗಿದೆ. ಈ ವಾರ್ ಸಿನಿರಂಗದಲ್ಲಿ ಮಾತ್ರವಲ್ಲ ರಾಜಕೀಯಕ್ಕೂ ಪ್ರವೇಶ ಮಾಡಿದ್ದು ಭಾಷಾ ಚರ್ಚೆ ನಡೆಯುತ್ತಿದೆ. ಪರಿಣಾಮ ಈ ಕುರಿತು ನಿಶಾದ್ ಅವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ ಅವರು, ಭಾರತದಲ್ಲಿ ವಾಸಿಸಲು ಬಯಸುವವರು ಹಿಂದಿಯನ್ನು ಪ್ರೀತಿಸಬೇಕಾಗುತ್ತದೆ. ನೀವು ಹಿಂದಿಯನ್ನು ಪ್ರೀತಿಸದಿದ್ದರೆ, ನೀವು ವಿದೇಶಿ ಅಥವಾ ವಿದೇಶಿ ಶಕ್ತಿಗಳೊಂದಿಗೆ ಸಂಬಂಧ ಹೊಂದಿದ್ದೀರಿ ಎಂದು ಭಾವಿಸಲಾಗುತ್ತದೆ ಎಂದು ಕಿಡಿಕಾರಿದರು.

ಸಂಜಯ್ ನಿಶಾದ್ ಅವರು ನಿರ್ಬಲ್ ಇಂಡಿಯನ್ ಶೋಷಿತ್ ಹಮಾರಾ ಆಮ್(NISHAD) ದಳದ ಮುಖ್ಯಸ್ಥರಾಗಿದ್ದಾರೆ. ಈ ಪಕ್ಷವನ್ನು ಸಾಮಾನ್ಯವಾಗಿ ಎಲ್ಲರೂ ನಿಶಾದ್ ಪಕ್ಷ ಎಂದೇ ಕರೆಯುತ್ತಾರೆ. ಈ ಪಕ್ಷವು ಆಡಳಿತಾರೂಢ ಬಿಜೆಪಿಯೊಂದಿಗೆ ಮಿತ್ರ ಪಕ್ಷವಾಗಿ ಉತ್ತರಪ್ರದೇಶದಲ್ಲಿ ಕೆಲಸ ಮಾಡುತ್ತಿದೆ.

ಸಂವಿಧಾನವು ಯಾವುದೇ ಭಾಷೆಗೆ ‘ರಾಷ್ಟ್ರೀಯ ಭಾಷೆ’ ಸ್ಥಾನಮಾನವನ್ನು ನೀಡುವುದಿಲ್ಲ. ಎಂಟನೇ ಶೆಡ್ಯೂಲ್ 22 ‘ಅಧಿಕೃತ ಭಾಷೆಗಳನ್ನು’ ಪಟ್ಟಿ ಮಾಡಲಾಗಿದೆ. ಅಧಿಕೃತ ಭಾಷೆಗಳ ಕಾಯಿದೆ, 1963, ಕೇಂದ್ರ ಸರ್ಕಾರದ ಅಧಿಕೃತ ಉದ್ದೇಶಗಳಿಗಾಗಿ ಬಳಸಲು ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಗೊತ್ತುಪಡಿಸಲಾಗಿದೆ.
