ಬೆಂಗಳೂರು: ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಛಾ ನಡೆಸಿದ ಪ್ರತಿಭಟನೆ ಉದ್ವಿಗ್ನ ಸ್ಥಿತಿ ತಲುಪಿದ ಘಟನೆ ಇಂದು ಬೆಂಗಳೂರಿನ ಸಿಎಂ ನಿವಾಸ ಕಾವೇರಿ ಮುಂಭಾಗದಲ್ಲಿ ನಡೆದಿದೆ.
ನಂದಿತಾ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಹಾಗೂ ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಕ್ಕೆ ಬ್ರೇಕ್ ಹಾಕುವಂತೆ ಒತ್ತಾಯಿಸಿ ಬಿಜೆಪಿ ಮಹಿಳಾ ಮೋರ್ಛಾದ ವತಿಯಿಂದ ಸಿಎಂ ಸಿದ್ದು ಅವರಿಗೆ ಮನವಿ ಸಲ್ಲಿಸಲು ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದ ತಂಡ ತೆರಳಿತ್ತು.
ಈ ವೇಳೆ ಮಹಿಳಾ ಮೋರ್ಛಾಕ್ಕೆ ಸಿಎಂ ನಿವಾಸಕ್ಕೆ ತೆರಳದಂತೆ ಪೊಲೀಸರು ತಡೆಯೊಡ್ಡಿದ್ದಾರೆ. ಇದರಿಂದ ಕೆರಳಿ ಕೆಂಡವಾದ ಮಹಿಳೆಯರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದು ಜಟಾಪಟಿ ಉಂಟುಮಾಡಿದರು. ಈ ವೇಳೆ ಪೊಲೀಸರು ಕೆಲವರನ್ನು ಬಂಧಿಸಿದ ಘಟನೆಯೂ ನಡೆಯಿತು.
ಈ ವೇಳೆ ಸಹನೆಯ ಕಟ್ಟೆಯೊಡೆದಿದ್ದ ಸಂಸದೆ ಶೋಭಾ ಅವರು ಪ್ರತಿಭಟನಾಕಾರರನ್ನು ಸ್ಥಳದಲ್ಲೇ ಕೂರುವಂತೆ ಹೇಳಿದ್ದಾರೆ.
ನಾವು ಶಾಂತ ರೀತಿಯಲ್ಲಿ ಮನವಿ ಸಲ್ಲಿಸುವ ಸಲುವಾಗಿ ಸಿಎಂ ಕಚೇರಿಗೆ ಬಂದಿದ್ದೆವು. ಆದರೆ ಪೊಲೀಸರು ನಮ್ಮ ಮೇಲೆ ಕೈಹಾಕಿದ್ದಾರೆ. ಪೊಲೀಸರು ಕಾಂಗ್ರೆಸ್ನ ಚೇಲಾಗಳಂತೆ ವರ್ತಿಸುತ್ತಿದ್ದಾರೆ. ನಮಗೂ ಸರಕಾರ ನಡೆಸಿ ಗೊತ್ತಿದೆ ನಾಳೆ ನಮ್ಮ ಸರಕಾರವೂ ಬರುತ್ತದೆ ಹುಷಾರ್ ಎಂದು ಹೇಳಿದ್ದಾರೆ.




