ಮೂಡುಬಿದಿರೆ: ಕಂಬಳ ಕ್ರೀಡೆಯ ಕಥಾ ಹಂದರ ಹೊಂದಿರುವ ‘ಬಿರ್ದ್ ದ ಕಂಬುಲ’ ತುಳು ಹಾಗೂ ವೀರ ಕಂಬಳ ಕನ್ನಡ ಭಾಷೆ ಸಿನಿಮಾಗಳಿಗೆ ಆಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಮುಹೂರ್ತ ನೆರವೇರಿಸಲಾಯಿತು.
ಹಟ್ಟಿಕುದ್ರು ಅನಂತಪದ್ಮನಾಭ ಭಟ್ ಕ್ಲಾಪ್ ಮಾಡುವ ಮೂಲಕ ಮುಹೂರ್ತ ನೆರವೇರಿಸಿದರು.ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ನೆಲ,ಜನ, ಪಶು ಸಂಬಂಧವನ್ನು ಸಾರುವ ಕ್ರೀಡೆ ಕಂಬಳ. ಈ ಕ್ರೀಡೆಯು ಅಹಿಂಸಾತ್ಮಕವಾಗಿ ನಡೆಯಬೇಕು. ಸಂಪ್ರದಾಯಕ್ಕೆ ಹೆಚ್ಚಿನ ಒತ್ತು ನೀಡುವಂತವಾಗಬೇಕು. ತುಳುನಾಡಿನ ಹೆಮ್ಮೆಯ ಕ್ರೀಡೆ ಕಂಬಳದ ಸಿನಿಮಾವು ಬಹು ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಇದರಿಂದಾಗಿ ನಮ್ಮ ಕಂಬಳ ಕ್ರೀಡಾ ಸಂಸ್ಕೃತಿಯೂ ಇತರರಿಗೂ ತಿಳಿಯುತ್ತದೆ ಎಂದು ನುಡಿದರು.
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾತನಾಡಿ,ಕರಾವಳಿಯ ಜಾನಪದ ಕ್ರೀಡೆ ಕಂಬಳದ ಬಗ್ಗೆ ಮೊದಲೇ ಆಸಕ್ತಿ ಹೊಂದಿದ್ದೆ. ಕಳೆದ ಬಾರಿ ಕಂಬಳಕ್ಕೆ ಬಂದಾಗ ಚಿತ್ರ ಮಾಡುವ ಬಗ್ಗೆ ಆಸಕ್ತಿ ಉಂಟಾಗಿತ್ತು. ಇದೀಗ ತುಳು ಮತ್ತು ಕನ್ನಡ ಭಾಷೆಯನ್ನು ಆಧರಿಸಿ ಚಲನಚಿತ್ರವನ್ನು ನಿರ್ದೇಶಿಸಲು ಕೈಗೆತ್ತಿಕೊಂಡಿದ್ದೇನೆ. ಕೋಣಗಳು ದೇವರಿಗೆ ನಮಸ್ಕರಿಸಿ ಕಂಬಳಕ್ಕೆ ತೆರಳುವ ಚಿತ್ರೀಕರಣದ ಮೂಲಕ ಚಾಲನೆ ನೀಡಲಾಗಿದೆ.
ಮೊದಲ ಹದಿನೈದು ದಿನ ಚಿತ್ರೀಕರಣದಲ್ಲಿ ಮೂಡುಬಿದಿರೆ ಕಂಬಳ ಕೆರೆಯಲ್ಲಿ ಹದಿನೈದು ಕ್ಯಾಮರಾ ಮೂಲಕ ಕೋಟಿ- ಚೆನ್ನಯ ಕಂಬಳ ಚಿತ್ರೀಕರಣ ಮಾಡಲಾಗುವುದು. ಬಳಿಕ ಕತೆಗೆ ಪೂರಕವಾಗಿ ಚಿತ್ರೀಕರಣ ಮಾಡಲಾಗುವುದು . ಈಗಾಗಲೇ ಒಂದು ಹಾಡಿನ ಧ್ವನಿ ಮುದ್ರಣವಾಗಿದ್ದು ಕಂಬಳ ಸಮಯದಲ್ಲಿ ಬಿಡುಗಡೆಗೊಳಿಸಲಾಗುವುದು. ಚಿತ್ರದಲ್ಲಿ ನವೀನ್ ಡಿ ಪಡೀಲ್, ಗೋಪಿನಾಥ್ ಸಹಿತ ಹಲವು ಪ್ರಸಿದ್ಧ ಕಲಾವಿದರು ಅಭಿನಯಿಸಲಿದ್ದಾರೆ. ನಾಯಕ ನಾಯಕಿಯ ಆಯ್ಕೆಯನ್ನು ಮುಂದಿನ ಜನವರಿ ತಿಂಗಳಲ್ಲಿ ಮಾಡಲಾಗುವುದು. ತುಳು ಚಿತ್ರಕ್ಕೆ ದೊಡ್ಡ ಮಟ್ಟದ ಅನುದಾನ ನೀಡಬೇಕೆಂದು ಆಗ್ರಹಿಸಿದರು.
ಆಲಂಗಾರು ದೇವಸ್ಥಾನದ ಆಡಳಿತದಾರ ಈಶ್ವರ ಭಟ್ , ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ನಿರ್ಮಾಪಕ ಅರುಣ್ ರೈ ತೋಡಾರು, ರಂಗಭೂಮಿ ಕಲಾವಿದ ವಿಜಯಕುಮಾರ್ ಕೊಡಿಯಾಲ್ ಬೈಲ್, ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ ಮತ್ತಿತರರು ಉಪಸ್ಥಿತರಿದ್ದರು.
