ಮಂಗಳೂರು :ಕಿತ್ತಳೆ ಹಣ್ಣು, ಮೂಸಂಬಿ ಮಾರುತ್ತಿದ್ದ ಹರೇಕಳ ಹಾಜಬ್ಬ ಅವರು ತನ್ನೂರಿನಲ್ಲಿ ಸರಕಾರಿ ಶಾಲೆ ಆರಂಭಿಸಿದ್ದಾರೆ. ಇಂತಹ ಸಾಧಕನಿಗೆ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವ ನೀಡಿದೆ.
ಅಕ್ಷರ ಸಂತ ಹಾಜಬ್ಬರು ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ಸಮಾರಂಭದ ವಿಡಿಯೋ ತುಣುಕನ್ನು ಎಲ್ಲ ವಿದ್ಯಾರ್ಥಿಗಳಿಗೂ ತೋರಿಸುವಂತೆ ಶಿಕ್ಷಕರಿಗೆ ಆದೇಶ ನೀಡಿದ್ದು ಆ ಮೂಲಕ ಶೈಕ್ಷಣಿಕ ಸಾಧಕನೊಬ್ಬ ಇತರರಿಗೆ ಪ್ರೇರಣೆ ಆಗುವಂತಹ ಕಾರ್ಯದ ಜೊತೆಗೆ ಮಾಡಲಾಗಿದೆ ಎಂದು ಹಾಜಬ್ಬ ಸಾಧನೆ ಜಿಲ್ಲಾ ಶಿಕ್ಷಣ ಇಲಾಖೆಗೆ ಗೌರವ ಸಂದಾಯವಾಗಿದೆ ಎಂದು ಶಿಕ್ಷಣ ಇಲಾಖೆಯ ವಿದ್ಯಾಂಗ ಉಪ ನಿರ್ದೇಶಕ ಜಿ. ಮಲ್ಲೇಸ್ವಾಮಿ ಹೇಳಿದರು.
ಹರೇಕಳ ನ್ಯೂಪಡ್ಪುವಿನ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಸನ್ಮಾನ ಸಮಾರಂಭದಲ್ಲಿ ಅವರು ಹಾಜಬ್ಬ ಅವರನ್ನು ಸನ್ಮಾನಿಸಿ ಮಾತನಾಡಿದರು.
ಹರೇಕಳ ಶ್ರೀ ರಾಮಕೃಷ್ಣ ಪ್ರೌಢ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕೆ. ರವೀಂದ್ರ ರೈ ಹರೇಕಳ, ಮಂಗಳೂರು ವಿವಿಯ ಪ್ರಾಧ್ಯಾಪಕ ಡಾ. ಪ್ರಶಾಂತ್ ನಾಯ್ಕ್, ಮಂಗಳೂರು ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ ರಾಜ್, ತಾಲೂಕು ಸಮನ್ವಯ ಅಧಿಕಾರಿ ಡಾ. ಪ್ರಶಾಂತ್ ಕುಮಾರ್, ಮಹಮ್ಮದ್ ಮೋನು, ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೆಪುಣಿ, ಟಾಲೆಂಟ್ ರಿಸರ್ಚ್ ಫೌಂಡೇಶನ್ ಸಲಹೆಗಾರ ಡಾ. ರಫೀಕ್ ಮಾಸ್ಟರ್, ಪಜೀರು ಚರ್ಚ್ ಉಪಾಧ್ಯಕ್ಷ ರಿಚರ್ಡ್, ಜುಮಾ ಮಸೀದಿಯ ಟಿ. ಖಾಲಿದ್ , ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಲ್ಯಾಣಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ದೇರಳಕಟ್ಟೆಯ ಫಾಹಿಮಾ ಇಂಟರ್ ನ್ಯಾಷನಲ್ ಟ್ರಾವೆಲ್ ಸಂಸ್ಥೆಯ ಪಾಲುದಾರ ಕಲಂದರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ಯಾಧರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಎಸಿಪಿ ಮಹೇಶ್ ಕುಮಾರ್ ಹಾಜಬ್ಬರ ಗುಣಗಾನ ಮಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಸ್ವಾಗತಿಸಿದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಹರೇಕಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
ವೈಯಕ್ತಿಕವಾಗಿ ತನಗೋಸ್ಕರ ಯಾರಿಂದಲೂ ಕಿಂಚಿತ್ತೂ ಸಹಾಯ ಯಾಚಿಸದ, ಎಲ್ಲವನ್ನು ಪ್ತೀತಿಯ ಶಾಲೆಗಾಗಿ ಅರ್ಪಿಸಿದ ಮಹಾನ್ ವ್ಯಕ್ತಿತ್ವದ ಹರೇಕಳ ಹಾಜಬ್ಬರಿಗೆ ದೇರಳಕಟ್ಟೆಯ ಫಾಹಿಮಾ ಇಂಟರ್ ನ್ಯಾಷನಲ್ ವತಿಯಿಂದ ಉಚಿತ ಹಜ್ ಮತ್ತು ಉಮ್ರಾ ಪ್ರವಾಸ ವ್ಯವಸ್ಥೆ ಕೊಡುಗೆ ನೀಡುತ್ತೇವೆ.
