ಕೈಕಂಬ : ‘ಜೀವ ಉಳಿದರೆ, ಭವಿಷ್ಯದಲ್ಲಿ ಅಭಿವೃದ್ಧಿ ಕಾರ್ಯ’ ಎಂದು ಪ್ರಧಾನಿ ಮೋದಿಯವರ ಸೂಚನೆಯಂತೆ ಕೊರೊನಾ ಕಷ್ಟಕಾಲದಲ್ಲಿ ಜನರ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗಿತ್ತು. ಆಗ ಅಭಿವೃದ್ಧಿ ಕಾರ್ಯಗಳು ಮಂದಗತಿಯಲ್ಲಿ ನಡೆದಿದ್ದರೂ ಈಗ ಇತರೆಲ್ಲ ಕ್ಷೇತ್ರಗಳಂತೆ ತನ್ನ ಕ್ಷೇತ್ರ ವ್ಯಾಪ್ತಿಯಲ್ಲೂ ಅಭಿವೃದ್ಧಿ ಕಾರ್ಯಕ್ಕೆ ವೇಗ ಸಿಕ್ಕಿದೆ ಎಂದರು.
ಮಂಗಳೂರು ನಗರಪಾಲಿಕೆಯ ೨೦ನೇ ತಿರುವೈಲ್ ವಾರ್ಡ್ ನ ತಿರುವೈಲು-ಮಂಜಲ್ದೋಟದಿಂದ ಉಳಾಯಿಬೆಟ್ಟು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆಗೆ ಕಾಂಕ್ರೀಟೀಕರಣ ಮತ್ತು ಚರಂಡಿ ರಚನೆಗೆ ಮಹಾತ್ಮಾ ಗಾಂಧಿ ಯೋಜನೆಯಡಿ ಮಂಜೂರಾಗಿರುವ ಒಂದು ಕೋಟಿ ರೂ ವೆಚ್ಚದ ಕಾಮಗಾರಿಗೆ ನ.01ರಂದು ಸೋಮವಾರ ಶಿಲಾನ್ಯಾಸಗೈದು ಅವರು ಮಾತನಾಡಿದರು.
ರಸ್ತೆಗಳು ಅಭಿವೃದ್ಧಿಗೊಂಡರೆ ಗ್ರಾಮೀಣರ ಬದುಕು ಸುಧಾರಿಸಲಿದೆ. ಅಭಿವೃದ್ಧಿ ಕಾರ್ಯಗಳಿಗೆ ಸ್ಥಳೀಯರ ಸಹಕಾರ ಅತ್ಯವಶ್ಯಕ. ಭರವಸೆಯಂತೆ ಈ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿಸುತ್ತಿದ್ದೇನೆ. ಅಭಿವೃದ್ಧಿ ನಿಟ್ಟಿನಲ್ಲಿ ತಾನು ಈ ಹಿಂದೆ ನೀಡಿರುವ ಭರವಸೆಗಳಿಗೆ ಬದ್ಧನಾಗಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್, ಗುರುಪುರ ವ್ಯವಸಾಯ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ, ಉಳಾಯಿಬೆಟ್ಟು ಪಂಚಾಯತ್ ಅಧ್ಯಕ್ಷ ಹೃಷಿಕೇಶ, ಸದಸ್ಯರಾದ ವಿಶ್ವನಾಥ ಶೆಟ್ಟಿ ಮತ್ತು ದಿನೇಶ್ ಪೆರ್ಮಂಕಿ, ಜಾಗ ಒದಗಿಸಿದ ಲಿಂಗಪ್ಪ ಸಾಲ್ಯಾನ್, ಉದ್ಯಮಿ ರಘು ಸಾಲ್ಯಾನ್, ಸದಾಶಿವ ಶೆಟ್ಟಿ, ಸಂಜೀವ ಮೊಯಿಲಿ, ಉದ್ಯಮಿ ಮೋಹನದಾಸ್ ಶೆಟ್ಟಿ, ಅನಿಲ್ ಕುಮಾರ್ ಶೆಟ್ಟಿ ತಿರುವೈಲು, ಸತೀಶ್ ಶೆಟ್ಟಿ ಮೂಡುಜೆಪ್ಪುಗುತ್ತು, ಅರ್ಚಕ ಅನಂತ ಉಪಾಧ್ಯಾಯ, ಬೂತ್ ಪದಾಧಿಕಾರಿಗಳು, ಪಕ್ಷ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು. ದಿನೇಶ್ ತಲ್ಲಿಮಾರ್ ಸ್ವಾಗತಿಸಿ ವಂದಿಸಿದರು.
