ಮುಂಬಯಿ: ಕರ್ನಾಟಕ ಸರಕಾರದ ಕನ್ನಡ ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಸಚಿವಾಲದ ಅಧೀನತ್ವದ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ಕೆ.ಸದಾಶಿವ ಶೆಣೈ ನೇಮಕ ಗೊಳಿಸಿದೆ. ಸರಕಾರವು ನೇಮಕಾತಿ ಆದೇಶ ಹೊರಡಿಸಿರುವುದ್ದನ್ನು ಕನ್ನಡ ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಜೆಸಿಂತಾ ಅಧಿಕೃತವಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಕಾಡೆಮಿಯ ನಿಯಮಾವಳಿಯ ರೀತ್ಯ ಪ್ರದತ್ತವಾಗಿರುವ ಅಧಿಕಾರದಂತೆ ಅಕಾಡೆಮಿಗೆ ನೂತನ ಅಧ್ಯಕ್ಷರನ್ನು ಒಳಗೊಂಡು ಒಟ್ಟು ಹತ್ತು ಸದಸ್ಯರನ್ನು ನೇಮಕಾತಿ ಮಾಡಿರುತ್ತದೆ. ಕೆ.ಸದಾಶಿವ ಶೆಣೈ ಮತ್ತು ಇತರೇ ಒಂಬತ್ತು ಸದಸ್ಯರುಗಳೆಂದರೆ ಗೋಪಾಲ ಸಿ.ಯಡಗೆರೆ, ಕೆ.ಕೆ ಮೂರ್ತಿ, ಶಿವಕುಮಾರ್ ಬೆಳ್ಳಿತಟ್ಟೆ, ಕೂಡ್ಲಿ ಗುರುರಾಜ್, ಶಿವಾನಂದ ತಗಡೂರು, ಸಿ.ಕೆ ಮಹೇಂದರ್, ಜಗನ್ನಾಥ ಶೆಟ್ಟಿ ಬಾಳ, ದೇವೇಂದ್ರಪ್ಪ ಕಪನೂರು, ಕೆ.ವಿ ಶಿವಕುಮಾರ್ ಆಗಿರುತ್ತಾರೆ.
ಜಗನ್ನಾಥ ಶೆಟ್ಟಿ ಬಾಳ:

ಪತ್ರಿಕೋದ್ಯಮದಲ್ಲಿ ಸುಮಾರು ಮೂರು ದಶಕಗಳ ಅವಿರತ ಸೇವೆ ಸಲ್ಲಿಸಿರುವ ಜಗನ್ನಾಥ ಶೆಟ್ಟಿ ಬಾಳ ಜಯಕಿರಣ ಕನ್ನಡ ದೈನಿಕದಲ್ಲಿ ಕಳೆದ ಒಂದುವರೆ ದಶಕದಿಂದ ಹಿರಿಯ ವರದಿಗಾರ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಡಬ್ಲ್ಯೂಜೆಎಸ್) ಇದರ ದ.ಕ ಜಿಲ್ಲಾ ಕೇಂದ್ರ ಸಮಿತಿ ಪ್ರತಿನಿಧಿಯಾಗಿರುವರು. ಈ ಹಿಂದೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದು ೨೦೧೮ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ೨೦೦೮ರಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವರು.
ಈ ಹಿಂದೆ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಆಗಿದ್ದ ದ.ಕ ಜಿಲ್ಲಾ ಬೆಳ್ತಂಗಡಿ ಮೂಲತಃ ಸದಾಶಿವ ಶೆಣೈ, ಸದ್ಯ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಜಗನ್ನಾಥ ಶೆಟ್ಟಿ ನೇಮಕಾತಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಆಫ್ ಮಂಗಳೂರು, ಮಂಗಳೂರು ಪತ್ರಿಕಾ ಭವನ ಟ್ರಸ್ಟ್ ದಕ್ಷಿಣ ಕನ್ನಡ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟç ಇದರ ಪದಾಧಿಕಾರಿಗಳು, ಸದಸ್ಯರು ಅಭಿನಂದಿಸಿದ್ದಾರೆ.
