ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡು ಆರೋಗ್ಯಾಧಿಕಾರಿ ಕಚೇರಿ ಬಳಿ ‘ಮಲೇರಿಯಾ ವಿರೋಧ ಮಾಸಾಚರಣೆ’ ಪ್ರಯುಕ್ತ ಪತ್ರಕರ್ತರಿಗಾಗಿ ಬುಧವಾರ ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಎಂ. ಮಾತನಾಡಿದರು. ಬಿ.ಸಿ.ರೋಡು: ‘ಮಲೇರಿಯಾ ವಿರೋಧ ಮಾಸಾಚರಣೆ’ ಪತ್ರಕರ್ತರಿಗೆ ಮಾಹಿತಿ ಕಾರ್ಯಾಗಾರ.
ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮಳೆನೀರು ಮತ್ತು ಚರಂಡಿ ನೀರು ನಿಂತು ಸೊಳ್ಳೆ ಉತ್ಪಾದನೆಗೊಂಡು ಮಲೇರಿಯಾ ಮತ್ತು ಡೆಂಗೆ ಪ್ರಮಾಣ ಹೆಚ್ಚಳವಾಗುತ್ತದೆ. ಜನರ ಮರಣಕ್ಕೆ ಕಾರಣವಾಗುವ ಮಲೇರಿಯಾ ಕೋವಿಡ್ ಗಿಂತಲೂ ಗಂಭೀರ ಪರಿಣಾಮ ಬೀರುತ್ತದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನವೀನಚಂದ್ರ ಕುಲಾಲ್ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಆರೋಗ್ಯಾಧಿಕಾರಿ ಕಚೇರಿ ಬಳಿ ‘ಮಲೇರಿಯಾ ವಿರೋಧ ಮಾಸಾಚರಣೆ’ ಪ್ರಯುಕ್ತ ಪತ್ರಕರ್ತರಿಗಾಗಿ ಬುಧವಾರ ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಪಕರು ಮತ್ತು ಮನೆಯಲ್ಲಿ ಸೊಳ್ಳೆ ಉತ್ಪಾದನಾ ಕೇಂದ್ರ ಕಂಡು ಬಂದರೆ ಅಂತಹವರಿಗೆ ತಲಾ ರೂ ೩೦ ಸಾವಿರ ಮತ್ತು ೧ ಸಾವಿರ ದಂಡ ವಿಧಿಸಲಾಗುತ್ತಿದೆ. ಸರ್ಕಾರಿ ಕಟ್ಟಡಗಳಲ್ಲಿ ಮಳೆನೀರು ಸಂಗ್ರಹಗೊಳ್ಳದಂತೆ ತಡೆಯಲು ಈಗಾಗಲೇ ಜಿಲ್ಲಾಧಿಕಾರಿ ಸುತ್ತೋಲೆ ಕಳುಹಿಸಿದ್ದಾರೆ ಎಂದರು.
ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಎಂ. ಮಾತನಾಡಿ, ಹೊರ ಜಿಲ್ಲೆಯ ರೋಗಿಗಳಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ದೃಢ ಮತ್ತು ಸಾವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆದರೆ ಜಿಲ್ಲೆಯಲ್ಲಿ ಗುಣಮಟ್ಟದ ವೈದ್ಯಕೀಯ ವ್ಯವಸ್ಥೆಯಿಂದ ಮಲೇರಿಯಾ, ಡೆಂಗೆ ಮತ್ತು ಕೋವಿಡ್ ನಿಯಂತ್ರಣಕ್ಕೆ ಸಾಧ್ಯವಾಗಿದೆ. ಪ್ರತೀ ಮನೆಯಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಅನಿವಾರ್ಯತೆ ಎದುರಾಗಿದೆ ಎಂದರು.
ಪತ್ರಕರ್ತರಾದ ವೆಂಕಟೇಶ ಬಂಟ್ವಾಳ್, ಮೋಹನ್ ಕೆ.ಶ್ರೀಯಾನ್ ರಾಯಿ, ಮೌನೇಶ ವಿಶ್ವಕರ್ಮ, ಸಂದೀಪ್ ಸಾಲ್ಯಾನ್, ಕಿರಣ್ ಸರಪಾಡಿ, ರತ್ನದೇವ್ ಪುಂಜಾಲಕಟ್ಟೆ, ಕಿಶೋರ್ ಪೆರಾಜೆ, ಯಾದವ ಅಗ್ರಬೈಲು, ಚಂದ್ರ ಕಲ್ಮಲೆ ಇದ್ದರು. ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಸ್ವಾಗತಿಸಿ, ವಂದಿಸಿದರು.
