ಮಂಗಳೂರು: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪದವಿನಂಗಡಿಯ ಮುಗ್ರೋಡಿಯಲ್ಲಿ ಬಡಕುಟುಂಬವೊಂದಕ್ಕೆ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಮುಗ್ರೋಡಿ ವತಿಯಿಂದ ನಿರ್ಮಿಸಲಾದ 7.5 ಲಕ್ಷ ರೂ ವೆಚ್ಚದ ಮನೆ ಹಸ್ತಾಂತರ ಹಾಗೂ ಸಭಾ ಕಾರ್ಯಕ್ರಮ ಭಾನುವಾರ ಜರುಗಿತು.
ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಮ.ನ.ಪಾ. ಸದಸ್ಯರುಗಳಾದ ಸಂಗೀತ ಆರ್ ನಾಯಕ್, ವನಿತಾ ಪ್ರಸಾದ್, ಜಯಾನಂದ ಅಂಚನ್, ಭಾರತೀ ದಿನೇಶ್, ಹಾಗೂ ಮುಗ್ರೋಡಿ ಕನ್ಸ್ಟ್ರಕ್ಷನ್ ಮಾಲಕರಾದ ಸುಧಾಕರ್ ಶೆಟ್ಟಿ ಮುಗ್ರೋಡಿ, ಹಿರಿಯರಾದ ಗಣಪ ಅಮಿನ್ , ನಾರಾಯಣ ಶೆಟ್ಟಿ, ದಾಸಣ್ಣಶೆಟ್ಟಿ, ಹಾಗೂ ಸಮಿತಿಯ ಅಧ್ಯಕ್ಷರಾದ ದಿವಾಕರ್ ಶೆಟ್ಟಿ, ಸಮಿತಿಯ ಹಿರಿಯರು ಹಾಗೂ ಶ್ರೀ ದುರ್ಗಾ ಪರಮೇಶ್ವರಿ ಸೇವಾ ಸಮಿತಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಂಗಳೂರಿನ ಮುಗ್ರೋಡಿಯ ಶ್ರಿ ದುರ್ಗಾಪರಮೇಶ್ವರಿ ಸೇವಾ ಸಮಿತಿ 1968 ಉದ್ಘಾಟನೆಗೊಂಡಿದ್ದು ಸಾಮಾಜಿಕ, ಧಾರ್ಮಿಕ, ಸಾಂಸ್ಕ್ರತಿಕವಾಗಿ ಜನಪರ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಮುಖ್ಯವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಶಾಲಾರಂಭ ಸಮಯದಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ಕೊಡೆ ವಿತರಣೆ, ಹಾಗೂ ತುರ್ತು ಸಂದರ್ಭದಲ್ಲಿ ದಾನಿಗಳ ಸಹಾಯದಿಂದ ವೈದ್ಯಕೀಯ ವೆಚ್ಚ ಭರಿಸಿದೆ.
ತಂದೆ ತಾಯಿಯನ್ನು ಕಳೆದುಕೊಂಡ ತೀರಾ ಬಡತನದಲ್ಲಿ ವಾಸಿಸುತ್ತಿರುವ ಶಾಂಭವಿ ಹಾಗೂ ಅವರ ಎರಡು ಸಹೋದರಿಯರು ವಾಸಿಸಲು ಒಂದು ಮನೆ ಇಲ್ಲದೆ ಸಂಕಷ್ಟದಲ್ಲಿ ವಾಸಿಸುವುದನ್ಮು ಗಮನಿಸಿ ಈ ಸಮಿತಿಯ ಸದಸ್ಯರು ತಾ.6-4-2020 ಮನೆ ಕೆಡವಿ 10-4-2021 ರಂದು ಮನೆಯ ಗುದ್ದಲಿ ಪೂಜೆ ನಡೆಸಿ ಯಾವುದೇ ಫಲಾಪೇಕ್ಷೆ ಇಲ್ಲದೆ ಎಲ್ಲ ಸದಸ್ಯರು ಸೇರಿ ಸುಮಾರು ಒಂಬತ್ತು ತಿಂಗಳಿನಲ್ಲಿ ದಾನಿಗಳ ಸಹಾಯದಿಂದ ಸುಂದರವಾದ ಮನೆ ನಿರ್ಮಿಸಲಾಯಿತು.
