ಕೈಕಂಬ: ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಿನ್ನೆಲೆಯಲ್ಲಿ ಎಂಸಿಎಫ್ ಸಂಸ್ಥೆಯು ತನ್ನ ಸಿಎಸ್ಆರ್ ಯೋಜನೆಯಡಿ ೨೦೨೦-೨೦೨೧ ವತಿಯಿಂದ ನಿರ್ಮಾಣ ಮಾಡಿಕೊಟ್ಟಿರುವ ಮೂರು ಶೌಚಾಲಯವನ್ನು ಶಾಲೆಗೆ ಜ.೩ರಂದು ಭಾನುವಾರ ಹಸ್ತಾಂತರಿಸಿದರು.

ಎಂಸಿಎಫ್ ಸಂಸ್ಥೆಯ ಪರವಾಗಿ ಮುಖ್ಯಮಹಾಪ್ರಬಂಧಕ ಗಿರೀಶ್ ಮತ್ತು ಡಿಜಿಎಂ ಮೆಡಿಕಲ್ ಸರ್ವಿಸ್ ಯೋಗೀಶ್ ಶೌಚಾಲಯದ ಕಟ್ಟಡವನ್ನು ಉದ್ಘಾಟಿಸಿದರು.ಗ್ರಾಮಾಂತರ ಭಾಗದಲ್ಲಿರುವ ಮೂಲಭೂತ ಸೌಲಭ್ಯ ವಂಚಿತ ಶಾಲೆಗಳ ವಿದ್ಯಾರ್ಥಿಗಳ ಶುಚಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಎಂಸಿಎಫ್ ಸಂಸ್ಥೆಯು ಸಿಎಸ್ಆರ್ ಯೋಜನೆಯಡಿ ಶಾಲೆಗಳಿಗೆ ಶೌಚಾಲಯ ನಿರ್ಮಾಣ ಮಾಡಿ ಕೊಡುವ ಯೋಜನೆಯನ್ನು ಹಲವು ವರ್ಷಗಳಿಂದ ಕೈಗೆತ್ತಿಕೊಂಡು ಬಂದಿದೆ. ಈ ಯೋಜನೆಯಡಿ ಬೆಳ್ಳೂರು ಶಾಲೆಗೆ ಶೌಚಾಲಯ ನಿರ್ಮಾಣ ಮಾಡಿಕೊಡಲಾಗಿದೆ ಎಂದು ಮುಖ್ಯಪ್ರಬಂಧಕ ಗಿರೀಶ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಎಂಸಿಎಫ್ ಸಂಸ್ಥೆಯು ಊರಿನ ಶಾಲೆಗೆ ನೀಡಿರುವ ಕೊಡುಗೆಗೆ ಪೂರಕವಾಗಿ ಸಂಸ್ಥೆಯ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಶತಮಾನೋತ್ಸವ ಹಿನ್ನೆಲೆಯಲ್ಲಿ ಊರಿನ ಹಿರಿಯ, ಕಿರಿಯರು ಸೇರಿ ಶತಮಾನೋತ್ಸವ ಕಟ್ಟಡ ಸಮಿತಿಯನ್ನು ರಚಿಸಲಾಗಿದ್ದು, ಈಗಾಗಲೇ ಶತಮಾನೋತ್ಸವ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ.

ಕಟ್ಟಡ ಸಮಿತಿ ಅಧ್ಯಕ್ಷ ಪ.ರಮೇಶ್ ಚಂದ್ರ ಭಂಡಾರಿ ಮಾತನಾಡಿ, ಬಡಗಬೆಳ್ಳೂರು ಸರಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿ ಪರಿವರ್ತಿಸುವ ಗುರಿಯನ್ನು ಶತಮಾನೋತ್ಸವ ಸಮಿತಿಯು ಕೈಗೆತ್ತಿಕೊಂಡಿದೆ. ಈಗಾಗಲೇ ಶತಮಾನೋತ್ಸವ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಆದುದರಿಂದ ಯೋಜನೆಯನ್ನು ಪೂರ್ಣಗೊಳಿಸಿ, ಮಾದರಿ ಶಾಲೆಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಇನ್ನಷ್ಟು ಕೈ ಜೋಡಿಸಬೇಕಿದೆ ಎಂದು ಮನವಿ ಮಾಡಿದರು.
ಕಾರ್ಯದರ್ಶಿ ಬಾಲಕೃಷ್ಣ ಕುಲಾಲ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚ್ಚೀಂದ್ರನಾಥ ರೈ, ಕಾರ್ಯದರ್ಶಿ ವಿಶ್ವಂಬರ, ಎಂಸಿಎಫ್ ಜಗದೀಶ್ ಮತ್ತು ಪಿಆರ್ಓ ಅಭಿನಂದನ್ ಉಪಸ್ಥಿತರಿದ್ದರು.ಸಂಚಾಲಕ ನರೇಂದ್ರನಾಥ ಭಂಡಾರಿ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಕೇಶವ ವಂದಿಸಿದರು. ಶಾಲಾ ಶಿಕ್ಷಕಿ ದಿವ್ಯಾ ಕಾರ್ಯಕ್ರಮ ನಿರೂಪಿಸಿದರು.
