ಕೋಲಾರ: ಕೋಲಾರ ನಗರದ ಆದಾಯ ತೆರಿಗೆ ಇಲಾಖೆಯಲ್ಲಿ ವಿವಾದ್ ಸೆ ವಿಶ್ವಾಸ್ ಯೋಜನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸ್ಥಳೀಯ ಆದಾಯ ತೆರಿಗೆ ಅಧಿಕಾರಿ ವಿ.ಸೀತಾಲಕ್ಷ್ಮೀ ವಿವಾದಿತ ತೆರಿಗೆ ಬಾಕಿ ಇಟ್ಟುಕೊಂಡಿರುವ ತೆರಿಗೆ ಪಾವತಿದಾರರು ಕಮೀಷನರ್ ಆಫ್ ಇನ್ಕಮ್ ಟ್ಯಾಕ್ಸ್ (ಅಪೀಲ್ಸ್) ಐ.ಟಿ.ಎ.ಟಿ ಹೈಕೋರ್ಟ್, ಸುಪ್ರಿಮ್ ಕೋರ್ಟ್ಗಳಲ್ಲಿ ಮೇಲ್ಮನವಿ ಸಲ್ಲಿಸಿರುವ ವ್ಯಕ್ತಿಗಳು ಶೇ.೧೦೦ ರಷ್ಟು ವಿವಾಧಿತ ತೆರಿಗೆ ಶೇ.೨೫ ರಷ್ಟು ಹಾಕಿರುವ ಬಡ್ಡಿ ಹಾಗೂ ದಂಡ ಕಟ್ಟಿದರೆ ವಿವಾದದಿಂದ ಮುಕ್ತಿ ಹೊಂದಬಹುದು. ಹಾಗೆ ಮಾಡಿದ್ದಲ್ಲಿ ವಿಧಿಸಬಹುದಾದ ಬಡ್ಡಿ, ದಂಡ ಹಾಗೂ ಪ್ರಾಸಿಕ್ಯೂಷನ್ನಿಂದ ಮುಕ್ತಿ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಕೋಲಾರ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಎನ್.ದೇವರಾಜ್ ಮಾತನಾಡಿ, ವಿವಾದ್ ಸೆ ವಿಶ್ವಾಸ್ ಪ್ರಯೋಜನಗಳು ಹಾಗೂ ಇದುವರೆಗೂ ಆಗಿರುವ ಪ್ರಗತಿಯ ಬಗ್ಗೆ ತಿಳಿಸುತ್ತಾ, ಸುಮಾರು ೭೨೪೮೦ ಕೋಟಿ ಈ ಯೋಜನೆ ಅಡಿ ನವೆಂಬರ್ ೧೭ರ ತನಕ ವಸೂಲಿಯಾಗಿದ್ದು, ೩೧ನೇ ಜನವರಿ ೨೦೨೦ಕ್ಕೆ ಅಪೀಲ್ಗಳಲ್ಲಿರುವ ವಿವಾದಿತ ತೆರಿಗೆ ಶೇ. ೨೫ ರಷ್ಟು ಬಡ್ಡಿ, ದಂಡ ಡಿಸೆಂಬರ್ ೩೧, ೨೦೨೦ರ ಒಳಗೆ ಪಾವತಿ ಮಾಡಿ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.ಇದೇ ಸಂದರ್ಭದಲ್ಲಿ ಸಭೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸ್ಪಷ್ಟೀಕರಣ ಕೊಡಲಾಯಿತು. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸಂಬಂಧಪಟ್ಟವರು ಹಾಜರಿದ್ದರು.
