ಬಂಟ್ವಾಳ:ಇಲ್ಲಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟಸ್ ಶ್ರೀ ಮಂತ್ರದೇವತೆ ಕೊರಗಜ್ಜ ಕ್ಷೇತ್ರದಲ್ಲಿ ಡಿ.೧೫ ರಂದು ಮಂಗಳವಾರ ನಡೆಯಲಿರುವ ಚಂಡಿಕಾಯಾಗಕ್ಕೆ ಜೀ ಕನ್ನಡ ಮಹರ್ಷಿವಾಣಿ ಖ್ಯಾತಿಯ ಡಾ.ಆನಂದ ಗುರೂಜಿ ಮತ್ತು ಕಟೀಲು ಕ್ಷೇತ್ರದ ವೇದಮೂರ್ತಿ ಕಮಲಾದೇವಿ ಅಸ್ರಣ್ಣ ಇವರು ಪೂರ್ಣಾಹುತಿಯಲ್ಲಿ ಪಾಲ್ಗೊಳ್ಳುವರು.
ಬೆಳಿಗ್ಗೆ ಗಂಟೆ ೭.೩೦ರಿಂದ ವೇದಮೂರ್ತಿ ಸುಬ್ರಹ್ಮಣ್ಯ ಪರಾಡ್ಕರ್ ಗುಂಡ್ಯಡ್ಕ ಮತ್ತು ರಾಧಾಕೃಷ್ಣ ಭಟ್ ಪೆದಮಲೆ ಮಾರ್ಗದರ್ಶನದಲ್ಲಿ ಚಂಡಿಕಾಯಾಗ ಆರಂಭಗೊಳ್ಳಲಿದೆ. ಇದೇ ವೇಳೆ ಕೊರಗಜ್ಜ ಭಕ್ತಿಗೀತೆ ಹಾಡಿ ಗಮನ ಸೆಳೆದ ಬಾಲ ಪ್ರತಿಭೆ ಕಾರ್ತಿಕ್ ಕಾರ್ಕಳ ಇವರನ್ನು ಸನ್ಮಾನಿಸಿ ಆಶೀರ್ವಚನ ನೀಡುವರು.

ಈಗಾಗಲೇ ರಾಯಿ ಪೇಟೆಯಿಂದ ಕೊರಗಜ್ಜ ಕ್ಷೇತ್ರ ತನಕ ವಿಶೇಷ ದ್ವಾರ ಸಹಿತ ಬ್ಯಾನರ್, ಬಂಟಿಂಗ್ಸ್ ಗಳಿಂದ ಅಲಂಕಾರಗೊಳಿಸಲಾಗಿದೆ. ಸಂಜೆ ರಾತ್ರಿ ಗಂಟೆ ೭.೩೦ಕ್ಕೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಿತ್ರನಟ ಅರ್ಜುನ್ ಕಾಪಿಕಾಡ್ ಮತ್ತು ದೇವದಾಸ ಕಾಪಿಕಾಡ್ ಭಾಗವಹಿಸುವರು. ರಾತ್ರಿ ಗಂಟೆ ೯ರಿಂದ ‘ಪನಿಯರೆ ಆವಂದಿನ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಡಿ.೧೭ರಂದು ರಾತ್ರಿ ಗಂಟೆ ೯ಕ್ಕೆ ಕಟೀಲು ಮೇಳದಿಂದ ೩ನೇ ವರ್ಷದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಮತ್ತು ಡಿ.೧೯ರಂದು ರಾತ್ರಿ ಗಂಟೆ ೮ ರಿಂದ “ಮಂತ್ರದೇವತೆ ಮತ್ತು ಕೊರಗಜ್ಜ ದೈವ”ಗಳಿಗೆ ವಾರ್ಷಿಕ ನೇಮ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಲೋಕೇಶ್ ತಿಳಿಸಿದ್ದಾರೆ.

