ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಆಶ್ರಯದಲ್ಲಿ ಕೀರ್ತಿನಗರದಲ್ಲಿರುವ ರೋಟರಿ ಟೆಂಪಲ್ ಟೌನ್ ಪಾರ್ಕ್ ಸಭಾಂಗಣದಲ್ಲಿ ದೀಪಾವಳಿ ಸಂಭ್ರಮ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ಶನಿವಾರ ರಾತ್ರಿ ನಡೆಯಿತು.
ದೀಪಾವಳಿ ಆಚರಣೆ ಮಹತ್ವದ ಕುರಿತು ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕರಾಮ ಪೂಜಾರಿ ಮಾತನಾಡಿದರು. ತುಳುನಾಡಿನಲ್ಲಿ ದೀಪಾವಳಿ ಆಚರಣೆ ಇಲ್ಲಿಯ ಸಂಸ್ಕೃತಿಗೆ ಅನುಗುಣವಾಗಿ ತನ್ನದೇ ವೈಶಿಷ್ಟ್ಯವನ್ನು ಹೊಂದಿದೆ. ದೀಪಾವಳಿ ಮೂರು ದಿನಗಳಲ್ಲಿ ನಮ್ಮ ಹಿರಿಯರನ್ನು ನೆನಪಿಸುವ, ಮುಂದಿನ ಪೀಳಿಗೆಗೆ ತುಳುನಾಡಿನ ಪರಂಪರೆಯನ್ನು ಪರಿಚಯಿಸುವ ಸಾರವಿದೆ. ಹಿಂದೆ ಕಷ್ಟದ ಬದುಕಿದ್ದರೂ, ದೀಪಾವಳಿಯನ್ನು ನಮ್ಮ ಹಿರಿಯರು ಬದ್ಧತೆಯಿಂದ ಆಚರಿಸುತ್ತಿದ್ದರು.ಆದರೆ ಇಂದು ನಾವು ನಮ್ಮ ಮೂಲ ಸಂಸ್ಕೃತಿ, ಪರಂಪರೆಯನ್ನು ಮರೆತು ದೀಪಾವಳಿಯನ್ನು ಅಚರಿಸುತ್ತಿದ್ದೇವೆ. ನಮ್ಮ ಪರಂಪರೆಯನ್ನು ಮರೆಯುತ್ತಿರುವುದರಿಂದ ನಾವು ಇಂದು ವಿವಿಧ ರೂಪಗಳಲ್ಲಿ ಅನಾಹುತಗಳನ್ನು ಆಹ್ವಾನಿಸುವಂತಾಗಿದೆ ಎಂದರು.
ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಮೂಡುಬಿದಿರೆ ಪುರಸಭೆಯ ನೂತನ ಅಧ್ಯಕ್ಷ ಪ್ರಸಾದ್ ಕುಮಾರ್, ಎಸ್ಎಸ್ಎಲ್ ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಲಯ 4 ರೋಟರಿ ಜಿಲ್ಲಾ ಉಪ ರಾಜ್ಯಪಾಲ ಡಾ.ಯತಿಕುಮಾರಗ ಸ್ವಾಮಿ ಗೌಡ, ವಲಯ ಸಭಾಪತಿ ಬಲರಾಮ್ ಕೆ.ಎಸ್., ರೋಟರಿ ಟೆಂಪಲ್ಟೌನ್ ಕಾರ್ಯದರ್ಶಿ ಪೂರ್ಣಚಂದ್ರ ಜೈನ್ ಉಪಸ್ಥಿತರಿದ್ದರು.
