ಮಂಗಳೂರು: ಗಾಳದ ಕೊಂಕಣಿ ಅಭ್ಯುದಯ ಸಂಘ(ರಿ.)ಇದರ ವಾರ್ಷಿಕ ಮಹಾಸಭೆಯು ಮಂಗಳೂರಿನ ನಾಗೋರಿಯಲ್ಲಿರುವ ಸಂಘದ ಕಚೇರಿಯಲ್ಲಿ ನ.8 ರಂದು ನಡೆಯಿತು. ಶ್ರೀ ಕ್ಷೇತ್ತ ಸೋಮನಾಥ ಉಳಿಯದ ಆಡಳಿತ ಸಮಿತಿ ಅಧ್ಯಕ್ಷ ಜೆ.ರವೀಂದ್ರ ನಾಯಕ್ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸುಮಾರು ಇನ್ನೂರೈವತ್ತಕ್ಕು ಹೆಚ್ಚು ವರ್ಷಗಳ ಇತಿಹಾಸವಿರುವ ನಮ್ಮ ಸಮಾಜದ ಕುರಿತಾಗಿ ಅನ್ಯ ಸಮಾಜದ ವ್ಯಕ್ತಿಯೊಬ್ಬರು ತನ್ನ ಪುಸ್ತಕದಲ್ಲಿ ಮಾನಹಾನಿಕಾರಕವಾಗಿ ಬರಹವನನ್ನು ಪ್ರಕಟಿಸಿರುವುದನ್ನು ಖಂಡಿಸಿದರಲ್ಲದೆ ಇದರ ವಿರುದ್ದ ಸಂಘ ಕಾನೂನು ರೀತಿಯ ಹೋರಾಟ ಮಾಡಬೇಕಾಗಿರುವ ನಿಟ್ಟಿನಲ್ಲಿ ಸಮುದಾಯದ ಸರ್ವರ ಸಹಕಾರವು ಅಗತ್ಯವಿದೆ ಎಂದು ಹೇಳಿದರು.

ಅತಿಥಿಯಾಗಿದ್ದ ಸಂಘದ ಮಾಜಿ ಅಧ್ಯಕ್ಷ ಅರುಣ್ ಕುಮಾರ್, ಶ್ರೀ ಸೋಮೇಶ್ವರೀ ಸೌ.ಸ.ನಿಯಮಿತದ ಅಧ್ಯಕ್ಷ ಉಮಾನಾಥ ನಾಯಕ್ ಉಳ್ಳಾಲ ಅವರು ಸಂಘದ ಚಟುವಟಿಕೆಯನ್ನು ಶ್ಲಾಘಿಸಿದರು. ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಹರೇಕಳ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನದಲ್ಲಿ “ಸಮುದಾಯ ಭವನ” ನಿರ್ಮಿಸುವ ಯೋಜನೆಯಿದ್ದು,ಸರ್ವರ ಸಹಕಾರವನ್ನು ಯಾಚಿಸಿದರು.
ಸಂಘದ ಉಪಾಧ್ಯಕ್ಷರಾದ ರಂಜನ್ ವೈ .ನಾಯಕ್ ದೇರೇಬೈಲ್, ಡಾ.ಧನಲಕ್ಷ್ಮೀ ಎಂ.ನಾಯಕ್,ಖಜಾಂಚಿ ಚಂದ್ರಶೇಖರ ಬಪ್ಪಾಲ್ ವೇದಿಕೆಯಲ್ಲಿದ್ದರು. ಮಾಜಿ ಕಾರ್ಯದರ್ಶಿ ಕೋಡಿ ಜಯ ನಾಯಕ್,ಸದಸ್ಯ ಎಸ್.ಯು.ಲಕ್ಷ್ಮಣ್ ನಾಯಕ್ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕೋವಿಡ್ -೧೯ ಹಿನ್ನಲೆಯಲ್ಲಿ ಕೆಲ ಸದಸ್ಯರು ವೀಡಿಯೋ ಕಾನ್ಪರೆನ್ಸ್ ಮೂಲಕ ಮಹಾಸಭೆಯಲ್ಲಿ ಭಾಗವಹಿಸಿದರು. ಸಂಘದ ಕಾರ್ಯದರ್ಶಿ ಮುರಳೀಧರ್ ನಾಯಕ್ ಸ್ವಾಗತಿಸಿ,ಲೆಕ್ಕಪತ್ರ ಮಂಡಿಸಿದರು.ಜತೆ ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ ಗತವರ್ಷದ ವರದಿ ವಾಚಿಸಿ,ಕೊನೆಯಲ್ಲಿ ವಂದಿಸಿದರು.