ಬಂಟ್ವಾಳ: ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟ ಕಾರ್ಯಕ್ರಮ ಗುರುವಾರ ನಡೆಯಿತು. ನಿವೃತ್ತ ಮುಖ್ಯ ಶಿಕ್ಷಕರಾದ ನಾರಾಯಣ ನಾಯಕ್ ಕರ್ಪೆರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರಮ ಜೀವಿಗಳಾದಲ್ಲಿ ದೇಹದ ಆರೋಗ್ಯಕ್ಕೆ ಬೇರೆ ಯಾವುದೇ ವ್ಯಾಯಾಮದ ಅವಶ್ಯಕತೆ ಇಲ್ಲ, ದೇಶದ ನಾಗರಿಕರು ಫಿಟ್ ಆದಲ್ಲಿ ದೇಶದ ಜನರ ಆರೋಗ್ಯ ಹಾಗೂ ದೇಶದ ಆರ್ಥಿಕ ಆರೋಗ್ಯ ಕೂಡ ಸದೃಡ ಆಗುವುದರಲ್ಲಿ ಸಂದೇಹವಿಲ್ಲ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಹರಿಪ್ರಸಾದ್ ಬಿ.ಶೆಟ್ಟಿಯವರು ಓಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಪ್ರೊ.ಕೃಷ್ಣಮೂರ್ತಿ ಎನ್.ಬಿ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಪ್ರೊ.ರೊನಾಲ್ಡ್ ಪ್ರವೀಣ್ ಕೊರೆಯರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ಕೆಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
