ಅಡ್ಯನಡ್ಕ ಜನತಾ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಕ ಚವರ್ಕಾಡು ನಾರಾಯಣ ಜೋಶಿ ವಿಧಿವಶ
ಅಡ್ಯನಡ್ಕ: ಅಡ್ಯನಡ್ಕ ಜನತಾ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಶಿಕ್ಷಣ ಪ್ರೇಮಿ, ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಆಡಳಿತ ಮಂಡಳಿ ಸದಸ್ಯರೂ ಆಗಿದ್ದ ಚವರ್ಕಾಡು ನಾರಾಯಣ ಜೋಶಿ ಅವರು ಅಲ್ಪಕಾಲದ ಅನಾರೋಗ್ಯದಿಂದ ಸೆ.20ರಂದು ವಿಧಿವಶರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳ ಕಾಲ ಅಡ್ಯನಡ್ಕ ಜನತಾ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದ ಇವರು ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ ನೀಡುವುದರಲ್ಲಿ ಮುಂಚೂಣಿಯಲ್ಲಿದ್ದರು.
ಶಾಲೆಯ ಕ್ರೀಡಾ ತಂಡವನ್ನು ರಾಜ್ಯಮಟ್ಟದ ತನಕ ಮುನ್ನಡೆಸಿದ ಹಿರಿಮೆ ಹೊಂದಿದ್ದರು. ಅಪೂರ್ವ ವ್ಯಕ್ತಿತ್ವ ಮತ್ತು ಶಿಕ್ಷಣದಲ್ಲಿ ವಿಶೇಷ ಕಳಕಳಿ ಹೊಂದಿದ್ದು, ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಯಉನ್ನತಿಗೆ ಅಪಾರವಾಗಿ ಪರಿಶ್ರಮಪಟ್ಟ ಮಹನೀಯರಲ್ಲೊಬ್ಬರಾಗಿ ಪ್ರಸಿದ್ಧರಾಗಿದ್ದರು. ಅವರು ಪತ್ನಿ, ಬಂಧುವರ್ಗ ಹಾಗೂ ಅಪಾರಸಂಖ್ಯೆಯ ವಿದ್ಯಾರ್ಥಿಗಳನ್ನು ಅಗಲಿದ್ದಾರೆ.
ಸಂತಾಪ ಸೂಚನ:
ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ವಾರಣಾಶಿ ಕೃಷ್ಣ ಸಭಾಭವನದಲ್ಲಿ ಸೆ. 26ರಂದು ಜರುಗಿದ ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಮಹಾಸಭೆಯಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದ ಚವರ್ಕಾಡು ನಾರಾಯಣ ಜೋಶಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಜನತಾ ವಿದ್ಯಾಸಂಸ್ಥೆಗಳ ನಿವೃತ್ತ ಪ್ರಾಂಶುಪಾಲ ಹಾಗೂ ಆಡಳಿತ ಮಂಡಳಿಯ ಸದಸ್ಯರೂ ಆಗಿರುವ ಬಳಂತಿಮೊಗರು ಈಶ್ವರ ಭಟ್ ಅವರು ಮಾತನಾಡಿ, ಚವರ್ಕಾಡು ನಾರಾಯಣ ಜೋಶಿ ಅವರು ಉತ್ತಮ ದೈಹಿಕ ಶಿಕ್ಷಣ ಶಿಕ್ಷಕರೂ, ಕ್ರೀಡಾ ತರಬೇತುದಾರರೂ ಆಗಿದ್ದರು. ಚಾಕಚಕ್ಯತೆಯಿಂದ ಕರ್ತವ್ಯ ನಿಭಾಯಿಸುವ ಜವಾಬ್ದಾರಿಯುತ ವ್ಯಕ್ತಿತ್ವ ಅವರದಾಗಿತ್ತು. ವಿದ್ಯಾಸಂಸ್ಥೆಯ ಏಳಿಗೆಗಾಗಿ ಶ್ರದ್ಧಾಪೂರ್ವಕವಾಗಿ ಸೇವೆ ಸಲ್ಲಿಸಿದ ಶ್ರೀಯುತರ ಅಗಲಿಕೆಯಿಂದ ತುಂಬಲಾರದ ನಷ್ಟವಾದಂತಾಗಿದೆ ಎಂದು ನುಡಿದರು.
ಮೃತರ ಗೌರವಾರ್ಥ ಮೌನಪ್ರಾರ್ಥನೆ ಜರುಗಿತು. ಜನತಾ ವಿದ್ಯಾಸಂಸ್ಥೆಗಳ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ಪ್ರಸ್ತಾವಿಸಿದರು. ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಆಡಳಿತ ಮಂಡಳಿ ಅಧ್ಯಕ್ಷರಾದ ಗೋವಿಂದ ಪ್ರಕಾಶ್ ಸಾಯ ಅಧ್ಯಕ್ಷತೆ ವಹಿಸಿದ್ದು, ಅಡಳಿತಾಧಿಕಾರಿ ರಮೇಶ ಎಂ. ಬಾಯಾರು, ಸದಸ್ಯರು, ಗಣ್ಯರು, ವಿದ್ಯಾಸಂಸ್ಥೆಯ ಮುಖ್ಯಸ್ಥರು, ಅಧ್ಯಾಪಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.



