ಬಂಟ್ವಾಳ.: ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಮನೆಯೊಂದು ಕುಸಿದ ಬಿದ್ದ ಘಟನೆ ಸೋಮವಾರ ಇರ್ವತ್ತೂರು ಗ್ರಾಮದಲ್ಲಿ ಸಂಭವಿಸಿದೆ.ಇರ್ವತ್ತೂರು ಗ್ರಾಮದ ಬಿ.ಎಸ್.ನಗರದ ಫೈರೂಜ್ ಅವರ ಮನೆ ಕುಸಿದು ಬಿದ್ದು ಸಂಪೂರ್ಣ ಹಾನಿಗೀಡಾಗಿದೆ. ಮನೆ ಮಂದಿ ಮನೆಯಿಂದ ಹೊರಗಡೆ ಇದ್ದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ. 
ಫೈರೂಜ್ ಅವರು ರಿಕ್ಷಾ ಚಾಲಕರಾಗಿದ್ದು, ಪತ್ನಿ ಹಾಗೂ ಪುತ್ರಿ ಮನೆಯಲ್ಲಿದ್ದರು. ಮಧ್ಯಾಹ್ನ ಸುಮಾರು 2 ಗಂಟೆಗೆ ಮನೆಯಿಂದ ಹೊರಗೆ ಕೆಲಸ ಮಾಡುತ್ತಿರುವಾಗ ಚಾವಣಿ ಸಹಿತ ಮನೆಯ ಗೋಡೆ ಬಿದ್ದಿತ್ತು.
ಘಟನೆಯಿಂದ ಮನೆ ಸಂಪೂರ್ಣ ನೆಲಸಮವಾಗಿದೆ. ಮನೆಯಲ್ಲಿದ್ದ ಪಾತ್ರೆ ಸಾಮಾನು, ದಿನಸಿ ವಸ್ತುಗಳು, ವಿದ್ಯುತ್ ಉಪಕರಣ ಗಳು ಎಲ್ಲವೂ ಅಡಿಯಲ್ಲಿ ಸಿಲುಕಿದೆ. ಗ್ರಾ.ಪಂ. ನಿಕಟಪೂರ್ವ ಸದಸ್ಯರಾದ ಸುಧೀಂದ್ರ ಶೆಟ್ಟಿ ಮತ್ತು ಪ್ರಶಾಂತ್ ಕೋಟ್ಯಾನ್ ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಸಹಕರಿಸಿದ್ದಾರೆ. ಗ್ರಾಮ ಕರಣಿಕ ರಾಜು ಲಮಾಣಿ ಅವರು ಭೇಟಿ ನೀಡಿದ್ದಾರೆ.
