ಬಂಟ್ವಾಳ: ಯಾವುದೇ ಸಾಧನೆಗೆ ಅಂಗವೈಕಲ್ಯತೆ ಅಡ್ಡಿ ಅಲ್ಲ,ಆತ್ಮವಿಶ್ವಾಸವೊಂದಿದ್ದರೆ ಸಾಕು ಎಂಬುದನ್ನು ಬಂಟ್ವಾಳದ ಕೌಶಿಕ್ ಮತ್ತೊಮ್ಮೆ ನಿರೂಪಿಸಿ ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಕಾಲಬೆರಳಿನಲ್ಲಿ ಬರೆದು,ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದ ಕೌಶಿಕ್ ರಾಜ್ಯಾದಾದ್ಯಂತ ಸುದ್ದಿ ಮಾಡಿದ್ಷ.ಇದೀಗ ಶನಿವಾರ ಗಣೇಶ ಚತುರ್ಥಿಯಂದು ಕಾಲಬೆರಳಿನಲ್ಲಿ ಹಲಸಿನ ಎಲೆಯಲ್ಲಿ ಕೊಟ್ಟಿಗೆ ಕಟ್ಟುವ ಮೂಲಕ ಸುದ್ದಿಯಾಗಿದ್ದಾನೆ.
ಈತ ಕಾಲಬೆರಳಲ್ಲಿ ಕೊಟ್ಟಿಗೆ ಕಟ್ಟುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ಕೌಶಿಕ್ ನ ಈ ಸಾಧನೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಕೃಷ್ಣಾಷ್ಟಮಿ,ಗಣೇಶ ಚತುರ್ಥಿಯಂದು ದ.ಕ.ಜಿಲ್ಲೆಯಲ್ಲಿ ಮೂಡೆ,ಹಲಸಿನ ಎಲೆಯ ಗುಂಡ( ಕೊಟ್ಟಿಗೆ) ಕಟ್ಟುತ್ತಾರೆ. ಹಾಗೆ ಬಂಟ್ವಾಳ ಕಂಚಿಕಾರ ಪೇಟೆಯ ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ದಂಪತಿಯ ಪುತ್ರ ವಿಕಲಚೇತನ ಕೌಶಿಕ್ ಕಾಲಬೆರಳಿನ ಮೂಲಕ ಹಲಸಿನ ಎಲೆಯ ಕೊಟ್ಟಿಗೆಯನ್ನು ಕಟ್ಟಿಕೊಡುವ ಮೂಲಕ ತಾಯಿಗೆ ನೆರವಾಗಿದ್ದಾನೆ.
ಬಹುಪ್ರತಿಭೆಯ ಕೌಶಿಕ್ ಹಾಡು ,ನೃತ್ಯದಲ್ಲು ಸೈ ಎನಿಸಿಕೊಂಡವನು,ಬಂಟ್ವಾಳ ಎಸ್ ವಿ ಎಸ್ ಪ್ರೌಢ ಶಾಲಾ ವಿದ್ಯಾರ್ಥಿಯಾಗಿದ್ದ ಈತ ಎಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಕಾಲಬೆರಳಲ್ಲಿ ಬರೆದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನ ಸೆಳೆದಿದ್ದ ಸಚಿವರು ತಮ್ಮ ಫೇಸ್ ಬುಕ್,ಟ್ವೀಟರ್ ನಲ್ಲು ಈತನ ಸಾಧನೆಯನ್ನು ಹಂಚಿಕೊಂಡು ಶಹಭಾಸ್ ಗಿರಿ ವ್ಯಕ್ತಪಡಿಸಿದ್ದರಲ್ಲದೆ,ಪರೀಕ್ಷೆ ಮುಗಿದ ಬಳಿಕ ಶ್ರೀಕ್ಷೇತ್ರ ಪೊಳಲಿಗೆ ಬಂದಿದ್ದ ಸಚಿವರು,ಕೌಶಿಕ್ ನನ್ನು ಖುದ್ದು ಭೇಟಿಯಾಗಿದ್ದರು.ಈತ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದು,ಶಾಸಕ ರಾಜೇಶ್ ನಾಯ್ಕ್ ಸಹಿತ ಹಲವು ಸಂಘಸಂಸ್ಥೆಗಳು ಈತನನ್ನು ಅಭಿನಂದಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಭರವಸೆಯಿತ್ತಿದ್ದಾರೆ.
