ಬಂಟ್ವಾಳ: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯಾ ಪ್ರಕರಣದ ಆರೋಪಿಯೋರ್ವನಿಗೆ ಇನ್ನೊಂದು ಬೈಕ್ ಡಿಕ್ಕಿಯಾದ ಪ್ರಕರಣ ಕೊಲೆಯತ್ನದ ತಿರುವು ಪಡೆದುಕೊಂಡು, ತಂಡವೊಂದು ಹಿಂದೂ ಯವಕನೊಬ್ಬನಿಗೆ ಹಲ್ಲೆಗೈದ ಘಟನೆ ಶುಕ್ರವಾರ ಬಂಟ್ವಾಳ ತಾ.ನ ಸಜೀಪಮುನ್ನೂರು ಗ್ರಾಮದ ಆಲಂಪಾಡಿಯಲ್ಲಿ ನಡೆದಿದ್ದು,ಈ ಘಟನೆಯಿಂದಾಗಿ ಪರಿಸರದಲ್ಲಿ ಕೆಲಹೊತ್ತುಗಳಕಾಲ ಆತಂಕದ ವಾತಾವರಣ ಉಂಟಾಯಿತು.
ಶರತ್ ಮಡಿವಾಳ ಹತ್ಯಾ ಪ್ರಕರಣದ ಆರೋಪಿಯಲ್ಲೊಬ್ಬನಾದ ಸಜಿಪ ನಿವಾಸಿ ಶರೀಫ್ ಎಂಬಾತ ಸಂಚರಿಸುತ್ತಿದ್ದ ಬೈಕ್ ಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ಮಧ್ಯಾಹ್ನದ ವೇಳೆಗೆ ನಡೆದಿದೆಯನ್ನಲಾಗಿದ್ದು,ಇದು ಸ್ಥಳೀಯವಾಗಿ ಕೊಲೆಯತ್ನದ ತಿರುವು ಪಡೆದು ತಂಡವೊಂದು ಅಲಾಡಿಯ ನವೀನ್ ಎಂಬವರ ಮೇಲೆ ದಾಳಿ ನಡೆಸಿ ಹಲ್ಲೆಗೈದಿದೆ.
ಈ ಘಟನೆಯಿಂದ ಪರಿಸರದಲ್ಲಿ ಆತಂಕಿತ ವಾತಾವರಣ ಉಂಟಾದ ಹಿನ್ನಲೆಯಲ್ಲಿ ಸುದ್ದಿ ತಿಳಿದ ಬಂಟ್ವಾಳ ನಗರ ಠಾಣಾ ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಸಜಿಪ ಮುನ್ನೂರು ಗ್ರಾಮದ ಆಲಂಪಾಡಿ ಶಾರದಾ ನಗರ ನಿವಾಸಿಯಾದ ಶರೀಫ್ ಮಸೀದಿಗೆ ತೆರಳಲೆಂದು ಮನೆಯಿಂದ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಬೈಕೊಂದು ಡಿಕ್ಕಿ ಹೊಡೆದಿದೆಯೆನ್ನಲಾಗಿದೆ. ಈ ವೇಳೆ ಶರೀಫ್ ರಸ್ತೆಗೆ ಬಿದ್ದುದ್ದು ಸಣ್ಣಪುಟ್ಟ ಗಾಯಗೊಂಡಿದ್ದನೆನ್ನಲಾಗಿದೆ.ಆಗ ಶರೀಫ್ ಮತ್ತು ಬೈಕ್ ಸವಾರರ ಮಧ್ಯೆ ವಾಗ್ವಾದವು ನಡೆದಿದೆಯೆನ್ನಲಾಗಿದೆ. ಈ ವೇಳೆ ಬೈಕ್ ಸವಾರರು ಅಲ್ಲಿಂದ ತೆರಳಿದ್ದಾರೆ.
ಈ ಘಟನೆ ಸ್ಥಳೀಯರಿಗೆ ಹೆಚ್ಚಾಗಿ ಗಮನಕ್ಕು ಬಂದಿರಲಿಲ್ಲ,ಇದರಿಂದ ಸಣ್ಣಪುಟ್ಟಗಾಯಗೊಂಡಿದ್ದ ಶರೀಫ್ ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.ಇದಾದ ಕೆಲಹೊತ್ತಿನಲ್ಲಿ ಶರೀಫ್ ಮೇಲೆ ತಂಡವೊಂದು ದಾಳಿ ನಡೆಸಿ ಕೊಲೆಗೆ ಯತ್ನಿಸಿದೆ ಎಂದು ಗಾಳಿಸುದ್ದಿಯಾಗಿ ಸ್ಥಳೀಯವಾಗಿ ತಿರುವು ಪಡೆದುಕೊಂಡು, ಇದಕ್ಕೆ ಪ್ರತೀಕಾರ ಎಂಬಂತೆ ಕೆಲವೇ ಹೊತ್ತಿನಲ್ಲಿ ಸಂಬಂಧಿಯೊಬ್ಬರ ಮರಣದ ಹಿನ್ನೆಲೆಯಲ್ಲಿ ಅಲ್ಲೇ ಓಡಾಡುತ್ತಿದ್ದ ಆಲಾಡಿ ನಿವಾಸಿ ನವೀನ್ ಎನ್ನುವ ಅಮಾಯಕ ಯುವಕನನ್ನು ಶರೀಫ್ ನ ಸಹಚರರ ತಂಡವೊಂದು ಅಡ್ಡಗಟ್ಟಿ ಹಲ್ಲೆ ನಡೆಸಿ ಪರಾರಿಯಾಗಿದೆ.
ನವೀನ್ ಗಾಯಗೊಂಡಿದ್ದು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿ.ಸಿ.ರೋಡ್ ನ ಉದಯ ಲಾಂಡ್ರಿ ಮಾಲಕ, ಆರ್ .ಎಸ್ .ಎಸ್.ಕಾರ್ಯಕರ್ತ ಶರತ್ ಮಡಿವಾಳರ ಮೇಲೆ 2017ರ ಜುಲೈ 4ರಂದು ಲಾಂಡ್ರಿ ಒಳಗೆ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು. ಜುಲೈ 7ರಂದು ಶರತ್ ಚಿಕಿತ್ಸೆ ಫಲಕಾರಿ ಆಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.ಈ ಪ್ರಕರಣದಲ್ಲಿ ಶರೀಫ್ ಕೂಡ ಒರ್ವ ಆರೋಪಿಯಾಗಿದ್ದಾನೆ. ಈ ಎರಡು ಘಟನೆಯ ಬಗ್ಗೆ ಗಾಯಾಳುಗಳ ದೂರಿನಂತೆ ಬಂಟ್ವಾಳ ನಗರ ಪೊಲೀಸರು ಪ್ರತ್ಯೇಕ ಎರಡು ಕೇಸು ದಾಖಲಿಸಿಕೊಂಡು , ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.