ಬಂಟ್ವಾಳ: ಜ್ಞಾನವೇ ಶ್ರೇಷ್ಠವಾದ ಸಂಪತ್ತು. ಬೌದ್ಧಿಕ ಕೊರತೆಯೇ ನಮ್ಮ ಬಹುತೇಕ ವಿಫಲತೆಗಳಿಗೆ ಕಾರಣ. ಜ್ಞಾನ ಸಂಪತ್ತಿನ ಮೂಲಕ ನಮ್ಮ ವ್ಯಕ್ತಿತ್ವ ವಿಕಾಸಗೊಳ್ಳಬೇಕಾದುದು ಇಂದಿನ ಅನಿವಾರ್ಯವಾಗಿದೆ ಎಂದು ರಾಜ್ಯ ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.
ಮೆಲ್ಕಾರ್ ಶ್ರೀ ಗುರು ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ವತಿಯಿಂದ ಶನಿವಾರ ಮೆಲ್ಕಾರ್ ನ ಬಿರ್ವ ಸೆಂಟೆರ್ ನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶ್ರೀ ಗುರು ಸೊಸೈಟಿ ಉಪಾಧ್ಯಕ್ಷರೂ ಆದ ಕೆ.ಹರಿಕೃಷ್ಣ ಬಂಟ್ವಾಳ್ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ಸೊಸೈಟಿ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ ಅಭಿನಂದನಾ ಭಾಷಣ ಮಾಡಿ ವ್ಯಕ್ತಿ, ಕುಟುಂಬ, ಸಂಘಟನೆಗಳು ಹಾಗೂ ಸಮುದಾಯ ಬೌದ್ಧಿಕವಾಗಿ ಬೆಳೆಯುವಲ್ಲಿ ಹರಿಕೃಷ್ಣ ಬಂಟ್ವಾಳರ ಕೊಡುಗೆ ಅಪಾರವಾದುದು. ಸುದೀರ್ಘ ಕಾಲ ಅಧಿಕಾರವಿಲ್ಲದಿದ್ದರೂ ತನ್ನ ಅಧ್ಯಯನ ಮತ್ತು ಅನುಭವದ ಮೂಲಕ ತನ್ನದೇ ಆದ ಪ್ರಭಾವಶಾಲಿ ವ್ಯಕ್ತಿತ್ವವನ್ನು ಉಳಿಸಿಕೊಂಡಿರುವ ಹರಿಕೃಷ್ಣರು ಸಾಮಾಜಿಕ ಚಿಕಿತ್ಸಕರಾಗಿ ಮಾದರಿಯಾದವರು ಎಂದರು.
ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮಾತನಾಡಿ ಶುಭ ಹಾರೈಸಿದರು.ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ, ಶ್ರೀ ಗುರು ಸೊಸೈಟಿ ನಿರ್ದೇಶಕ ಕೆ.ಸಂಜೀವ ಪೂಜಾರಿ ಬೊಳ್ಳಾಯಿ ಸ್ವಾಗತಿಸಿ,ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕರಾದ ನಾರಾಯಣ ಪೂಜಾರಿ ಬೊಲ್ಲುಕಲ್ಲು, ರತ್ನಾಕರ ಪೂಜಾರಿ ಮೆಲ್ಕಾರ್, ಉಮೇಶ ಸುವರ್ಣ ತುಂಬೆ, ಸಂತೋಷ್ ಕುಮಾರ್ ಕೊಟ್ಟಿಂಜ, ಪುಷ್ಪಾವತಿ ಕೊಲ್ಯ, ತುಳಸಿ ಇರಾ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಉಪಸ್ಥಿತರಿದ್ದರು.ನಿರ್ದೇಶಕರಾದ ರಮೇಶ ಅನ್ನಪ್ಪಾಡಿ ಸನ್ಮಾನ ಪತ್ರ ವಾಚಿಸಿದರು. ರತ್ನಾಕರ ಪೂಜಾರಿ ನಾಡಾರು ವಂದಿಸಿದರು.ಪತ್ರಕರ್ತ ಗೋಪಾಲ ಅಂಚನ್ ಮತ್ತು ಗಿರೀಶ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.
