ಶ್ರೀನಿವಾಸಪುರ: ಕೃತಕ ಗರ್ಭಧಾರಣಾ ಕಾರ್ಯಕರ್ತರು ಬರಡು ರಾಸುಗಳನ್ನು ಗುರ್ತಿಸಿ ಅಗತ್ಯ ಚಿಕಿತ್ಸೆ ನೀಡುವುದರ ಮೂಲಕ, ರೈತರಿಗೆ ನೆರವಾಗಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು.ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೃತಕ ಗರ್ಭಧಾರಣಾ ಕಾರ್ಯಕರ್ತರಿಗೆ ಬರಡು ರಾಸು ಚಿಕಿತ್ಸೆ ಕೈಗೊಳ್ಳಲು ಅಗತ್ಯವಾದ ಟ್ಯಾಬ್ಲೆಟ್ಗಳನ್ನು ವಿತರಿಸಿ ಮಾತನಾಡಿ, ಹಾಲು ಉತ್ಪಾದಕರು ಅಮೂಲ್ಯವಾದ ರಾಸುಗಳನ್ನು ಬರಡು ಎಂಬ ಹಣೆಪಟ್ಟಿ ಕಟ್ಟಿ ತೀರಾ ಕಡಿಮೆ ಹಣಕ್ಕೆ ಮಾರಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಹಾಲು ಉತ್ಪಾದಕರು ಮೂಢ ನಂಬಿಕೆಗಳನ್ನು ಬಿಡಬೇಕು. ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು. ಈಗ ಚಿಕಿತ್ಸೆ ನೀಡುವ ಮೂಲಕ ಬರಡು ರಾಸು ಗರ್ಭಧರಿಸುವಂತೆ ಮಾಡಬಹುದಾಗಿದೆ. ಬರಡು ರಾಸು ಎಂದು ಮಾರಿಬಿಡದೆ ತಜ್ಞ ವೈದ್ಯರಿಂದ ಅಗತ್ಯವಾದ ಚಿಕಿತ್ಸೆ ಕೊಡಿಸಬೇಕು ಎಂದು ಸಲಹೆ ಮಾಡಿದರು.
ಉಪ ಕಚೇರಿಯ ಉಪ ವ್ಯವಸ್ಥಾಪಕ ಡಾ.ವಿ.ಎಸ್.ಶ್ರೀಕಾಂತ್ ಕಾರ್ಯಕರ್ತರಿಗೆ ಟ್ಯಾಬ್ಲೆಟ್ ಬಳಸುವ ವಿಧಾನ ತಿಳಿಸಿಕೊಟ್ಟರು. ಪ್ರಗತಿ ಕುರಿತ ವಿವರಗಳನ್ನು ಇನ್ಆ್ಯಫ್ ನಲ್ಲಿ ನಮೂದಿಸಬೇಕು ಎಂದು ಸೂಚಿಸಿದರು.
ಸಹಾಯಕ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ, ವಿಸ್ತರಣಾಧಿಕಾರಿಗಳಾದ ಪಿ.ಕೆ.ನರಸಿಂಹರಾಜು, ಎನ್.ಗಣೇಶ್, ಕೆ.ಪಿ.ಶ್ವೇತಾ, ಎ.ಎನ್.ಶ್ರೀನಿವಾಸಮೂರ್ತಿ ಇದ್ದರು.
