ಕೋಲಾರ: ಯಾರದೋ ಹೇಳಿಕೆ ಮಾತನ್ನೇ ಆಧಾರವಾಗಿಟ್ಟುಕೊಂಡು ಸತ್ಯ ತಿಳಿಯದೇ ಹಿರಿಯ ನಾಯಕ ರಮೇಶ್ಕುಮಾರ್ ವಿರುದ್ದ ವೈಯುಕ್ತಿಕ ಟೀಕೆ, ತೇಜೋವಧೆಗೆ ಮುಂದಾಗಿರುವ ಜಿಪಂ ಸದಸ್ಯ ಕೆ.ಎಸ್.ನಂಜುಂಡಪ್ಪ ವರ್ತನೆ ಅವರ ಘನತೆಗೆ ತಕ್ಕುದಲ್ಲ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹಾಗೂ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಟೀಕಿಸಿದ್ದಾರೆ.
ಈ ಕುರಿತು ಜಂಟಿ ಹೇಳಿಕೆ ನೀಡಿರುವ ಅವರು, ಕಳೆದ ಶುಕ್ರವಾರ ಡಿಸಿಸಿ ಬ್ಯಾಂಕಿಗೆ ಆಗಮಿಸಿದ್ದ ರಮೇಶ್ಕುಮಾರ್, ನಂಜುಂಡಪ್ಪ ಅವರ ಹೆಸರನ್ನೂ ಪ್ರಸ್ತಾಪಿಸಲಿಲ್ಲ ಮತ್ತು ಕೋಳಿ,ಮೊಟ್ಟೆ ಮಾರುವವರು ಎಂದು ಕೀಳಾಗಿಯೂ ಮಾತನಾಡಲಿಲ್ಲ, ಆದರೆ ಶಾಸಕರ ಅಭಿವೃದ್ದಿ ಕಾರ್ಯವನ್ನು ಮರೆಮಾಚಲು ನಡೆಸಿರುವ ಕುತಂತ್ರದ ಭಾಗವೇ ಅವರನ್ನು ವೈಯಕ್ತಿಕವಾಗಿ ನಿಂದಿಸಿರುವುದು ಎಂದು ಸ್ವಷ್ಟಪಡಿಸಿದ್ದಾರೆ.
ಕೋಳಿ ಸಾಕಾಣಿಕೆರಕ್ಷಣೆಗೆ ಮಾತುಕತೆ
ರಮೇಶ್ಕುಮಾರ್ ಅವರು ರಾಜ್ಯ ಪಶುಪಾಲನಾ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಹಿಂದೆ ಕುಮಾರಸ್ವಾಮಿ ಸರ್ಕಾರದಲ್ಲಿ ಕುಕ್ಕೋಟೋದ್ಯಮವನ್ನು ಕೃಷಿವಲಯವನ್ನಾಗಿ ಘೋಷಿಸುವ ಸಂಬಂಧ ಸಲ್ಲಿಸಿ ನೆನೆಗುದಿಗೆ ಬಿದ್ದಿದ್ದ ಕಡತ ವಿಲೇವಾರಿಗೆ ಮನವಿ ಮಾಡಿದರು ಎಂದು ತಿಳಿಸಿದರು.
ಬ್ಯಾಂಕ್ ಬಡ್ಡಿಹಣಬಿಡುಗಡೆಗೆ ಮನವಿ
ಇದೇ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡಿದ ಸಾಲದ ಕೇಂದ್ರದ ಪಾಲಿನ ಬಡ್ಡಿ ಹಣ ಕಳೆದ ಮೂರು ವರ್ಷಗಳಿಂದ ಬಿಡುಗಡೆಯಾಗಿಲ್ಲ, ಈ ಕುರಿತು ರಾಜ್ಯ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕಾ ದೇವಿಯವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದರು.
ನಂತರ ಕೇಂದ್ರದ ಎನ್ಆರ್ಎಲ್ಎಂ(ರಾಷ್ಟ್ರೀಯ ಗ್ರಾಮೀಣ ಲವ್ಲಿವುಡ್ ಮಿಷನ್)ನ ಅಧಿಕಾರಿ ಲೋಕೇಶ್ ಜತೆಗೂ ಹಾಗೂ ಸಹಕಾರ ಇಲಾಖೆ ಹೆಚ್ಚುವರಿ ಪ್ರಬಂಧಕ ಶಿವಪ್ರಕಾಶ್ ಜತೆ ಶಾಸಕರು ಮಾತನಾಡಿ, ಬಡ್ಡಿಹಣ ಬಿಡುಗಡೆಗೆ ಮನವಿ ಮಾಡಿದರು ಎಂದು ತಿಳಿಸಿದರು.
ಖಳನಾಯಕನನ್ನಾಗಿಬಿಂಬಿಸಲು ಯತ್ನ
ಇದೇ ಸಂದರ್ಭದಲ್ಲಿ ಸ್ಥಳೀಯವಾಗಿ ಅಭಿವೃದ್ದಿ ವಿಚಾರವನ್ನು ಅನೌಪಚಾರಿಕವಾಗಿ ಮಾತನಾಡಿದ ರಮೇಶ್ಕುಮಾರ್ ಅವರು, ಕೆಸಿ ವ್ಯಾಲಿ ಯೋಜನೆಯನ್ನು ಶ್ರಮವಹಿಸಿ ತಂದೆ, ಜನ್ನಘಟ್ಟ ಕೆರೆ ಕೆಸಿ ವ್ಯಾಲಿ ನೀರು ಬಂದ 14 ದಿನದಲ್ಲಿ ತುಂಬಬೇಕಾಗಿತ್ತು ಆದರೆ 7 ತಿಂಗಳಾದರೂ ತುಂಬಲಿಲ್ಲ ಎಂದರು.
ಈ ಸಂಬಂಧ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರಿಗೆ ಜಿಲ್ಲೆಯ ಜನಪ್ರತಿನಿಧಿಗಳು ನೀಡಿದ ಮನವಿಯಂತೆ ಅಕ್ರಮ ನೀರಿನ ಸಂಪರ್ಕ ಕಡಿದು ಹಾಕಿ, ಚೆಕ್ಡ್ಯಾಂಗಳಲ್ಲಿ ತುಂಬಿದ ನೀರು ಹರಿಸಲು ಸೂಚಿಸಿದರು.
ಕೆಸಿ ವ್ಯಾಲಿ ನೀರಿನ ಈ ಆದೇಶಕ್ಕೆ ಸಂಬಂಧಿಸಿದಂತೆ ನೀರು ಹರಿಯುವ ಕೋಲಾರ,ಮಾಲೂರು,ಕೆಜಿಎಫ್, ಬಂಗಾರಪೇಟೆ ಜನಪ್ರತಿನಿಧಿಗಳ ಮನವಿಗೆ ಸಚಿವರು ಸ್ಪಂದಿಸಿ ಕ್ರಮ ಕೈಗೊಂಡಿದ್ದಾರೆ, ಆದರೆ ನಾನೇ ಮಾಡಿಸಿದ್ದು ಎಂದು ಅಪಪ್ರಚಾರ ಮಾಡಲಾಗುತ್ತಿದೆ, ನನ್ನನ್ನು ಖಳನಾಯಕನನ್ನಾಗಿ ಬಿಂಬಿಸಲಾಗಿದೆ ಎಂದು ನೋವು ತೋಡಿಕೊಂಡರು.
ಕೋಳಿಮೊಟ್ಟೆಬೆಲೆ ಕೇಳಿದ್ದಷ್ಟೆ
ಅನಿಲ್ಕುಮಾರ್ ಸ್ವಷ್ಟನೆ ನೀಡಿ, ನಂತರ ಫೌಲ್ಟ್ರೀ ಫಾರಂ ಹೊಂದಿರುವ ನನ್ನೊಂದಿಗೆ ರಮೇಶ್ಕುಮಾರ್ ಮಾತನಾಡಿ, ಲಾಕ್ಡೌನ್ ನಂತರ ಕೋಳಿ ಮೊಟ್ಟೆ ಬೆಲೆ ಏರಿಕೆಯಾಗಿದೆಯೇ ಎಂದು ಮಾಹಿತಿ ಕೇಳಿದರು ಎಂದರು.ಆದರೆ ಇದನ್ನು ಯಾರೋ ತಿರುಚಿ ಕೋಳಿ ಮಾರುವವರೆಲ್ಲಾ ನನ್ನ ಬಗ್ಗೆ ಮಾತನಾಡಿದ್ದಾರೆ ಎಂದು ಪ್ರಕಟಿಸಿದ ಆಧಾರ ರಹಿತ ಹೇಳಿಕೆ ಮಾತನ್ನೇ ನಂಬಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಜಿಪಂ ಸದಸ್ಯ ನಂಜುಂಡಪ್ಪ ವೈಯುಕ್ತಿಕವಾಗಿ ತೇಜೋವಧೆಗೆ ಮುಂದಾಗಿದ್ದನ್ನು ಖಂಡಿಸಿದ್ದಾರೆ.
ಹಿರಿಯ ಮುತ್ಸದ್ದಿ, ಜಿಲ್ಲೆಗೆ ಕೆಸಿ ವ್ಯಾಲಿ, ಎತ್ತಿನಹೊಳೆ ನೀರು ಹರಿಸುವಲ್ಲಿ ಮತ್ತು ಬೆಂಗಳೂರು ಉತ್ತರ ವಿವಿ ತರಿಸುವಲ್ಲಿ, ಜಿಲ್ಲಾಸ್ಪತ್ರೆ ಆಧುನೀಕರಣಕ್ಕೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಹಕಾರದೊಂದಿಗೆ ಶ್ರಮಿಸಿದ ರಮೇಶ್ಕುಮಾರ್ ಅವರ ಎಲ್ಲಾ ಕಾರ್ಯಗಳನ್ನು ಮರೆಮಾಚಿ ವೈಯುಕ್ತಿಕ ನಿಂದನೆಗೆ ಇಳಿದಿದ್ದು ಸರಿಯಲ್ಲ ಎಂದು ತಿಳಿಸಿದ್ದಾರೆ. ಅದೇ ರೀತಿ ಅವರು ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನಾ ರಮೇಶ್ಕುಮಾರ್ ಅವರು ನೀಡಿದ್ದ ಚುನಾವಣಾ ಪ್ರಣಾಳಿಕೆಯಂತೆಯೇ ಉಚಿತ ಅಕ್ಕಿ ಯೋಜನೆ ಜಾರಿಗೆ ಬಂದಿದ್ದು, ಶ್ರೀನಿವಾಸಪುರ ಕ್ಷೇತ್ರಕ್ಕೆ 20 ಸಾವಿರ ಮನೆಗಳನ್ನು ತಂದು ಗುಡಿಸಲು ರಹಿತ ಕ್ಷೇತ್ರವಾಗಿಸಿದ ಅವರ ಅಭಿವೃದ್ದಿ ಕಾರ್ಯಗಳನ್ನು ಮರೆಮಾಚಲು ನಡೆಸಿರುವ ರಾಜಕೀಯ ಕುತಂತ್ರದ ಭಾಗವೇ ಅವರ ವಿರುದ್ದದ ವೈಯಕ್ತಿಕ ಟೀಕೆಗಳು ಎಂದು ಕಿಡಿಕಾರಿದ್ದಾರೆ.
