ಮಂಗಳೂರು: ಸ್ನೇಹಿತರ ಜೊತೆಗೂಡಿ ಈಜಾಡಲು ತೆರಳಿದ ವ್ಯಕ್ತಿಯೊಬ್ಬರು ಮುಳುಗಿ ಮೃತಪಟ್ಟ ಘಟನೆ ಮರವೂರು ಡ್ಯಾಂ ಬಳಿ ಮಂಗಳವಾರ ನಡೆದಿದೆ. ಮೃತರನ್ನು ಕಾವೂರು ಬೊಲ್ಪುಗುಡ್ಡೆ ನಿವಾಸಿ ಪ್ರಶಾಂತ್ ಶೆಟ್ಟಿ (೪೪) ಎಂದು ಗುರುತಿಸಲಾಗಿದೆ.
ಇವರು ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್. ಪ್ರಶಾಂತ್ ಶೆಟ್ಟಿ ಮಂಗಳಾ ಈಜು ಕೊಳದಲ್ಲಿ ಈಜಲು ತೆರಳುತ್ತಿದ್ದು, ಕೊರೊನಾ ಹಿನ್ನೆಲೆಯಲ್ಲಿ ಈಜು ಕೊಳ ಮುಚ್ಚಿರುವುದರಿಂದ ಸ್ಥಳೀಯ ಕೆಲ ಯುವಕರೊಂದಿಗೆ ಮರವೂರು ಡ್ಯಾಂ ಬಳಿಯ ಹಳ್ಳದಲ್ಲಿ ಈಜಾಡಲು ತೆರಳಿದ್ದ ವೇಳೆ ಮುಳುಗಿ ಮೃತಪಟ್ಟಿದ್ದಾರೆ. ಇವರಿಗೆ ತಾಯಿ, ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. ಇವರು ಬೊಕ್ಕಪಟ್ಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಸಕ್ರಿಯ ಸದಸ್ಯರು. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
