ರಾಯಲ್ಪಾಡು : ಧಾರ್ಮಿಕ ಕಾರ್ಯಗಳು ಮಾನಸಿಕ ನೆಮ್ಮದಿ ನೀಡುವುದಲ್ಲದೆ ಮನೋಬಲವನ್ನು ಹೆಚ್ಚಿಸಲು ಪ್ರೇರಣೆಯಾಗುತ್ತದೆ ಎಂದು ಶಾಸಕ ಕೆ.ಆರ್.ರಮೇಶ್ಕುಮಾರ್ ತಿಳಿಸಿದರು. ರಾಯಲ್ಪಾಡು ಹೋಬಳಿಯ ಬೈರಗಾನಪಲ್ಲಿ ಗ್ರಾಮದಲ್ಲಿನ ಕೋದಂಡರಾಮಸ್ವಾಮಿ ಪುನರ್ ಪ್ರತಿಷ್ಠಾಪನಾ ಮತ್ತು ನೂತನ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗುಂಡು ಮಾತನಾಡಿದರು. ಜೀವನ ಜಂಜಾಟದ ನಡುವೆ ಮನುಷ್ಯ ಧಾರ್ಮಿಕ ಕಾರ್ಯಗಳತ್ತ ವಿಮುಖನಾಗುತ್ತಿದ್ದು, ನಡೆ ನುಡಿಗಳಲ್ಲಿ ಮನುಷ್ಯ ಎಲ್ಲಿಯ ತನಕ ಶುದ್ದನಾಗಿರುತ್ತಾನೆ,ಅಲ್ಲಿಯ ತನಕ ಮನುಷ್ಯ ಶ್ರೇಷ್ಠನಾಗಿರುತ್ತಾನೆ.ಜನರು ಆಧ್ಯಾತ್ಮಿಕತೆಯನ್ನು ಕೇವಲ ಆಡಂಬರಕ್ಕೆ ಸೀಮಿತಗೊಳಿಸದೆ,ನಿರ್ಮಲ ಭಕ್ತಿಯಿಂದ ಪಾಲಿಸಿ, ದೇವತೆಗಳ ಆರಾಧನೆಯಿಂದ ಗ್ರಾಮಸುಭೀಕ್ಷವಾಗಿರುತ್ತದೆ ಎಂದರು.

ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ ಪ್ರತಿಯೊಬ್ಬರು ದೇವರಲ್ಲಿ ನಂಬಿಕೆ ಇಡಬೇಕು. ಧಾರ್ಮಿಕ ಕಾರ್ಯಗಳಲ್ಲಿ ಗ್ರಾಮದ ಜನರು ಒಂದಡೆ ಸೇರಿ ಸಂತೋಷದಿಂದ ಒಗ್ಗಟ್ಟಿನಿಂದ ಆಚರಿಸುವುದೇ ಹಬ್ಬವಾಗಿದೆ. ವಿಜ್ಞಾನ ಎಷ್ಟೇ ಮುಂದುವರೆದರೂ ಮೂಢನಂಬಿಕೆ ದೂರವಾಗಿಲ್ಲ.ಉತ್ಸವ ಆಚರಣೆಗಳು ಮನುಷ್ಯನ ಮನಸ್ಸುನ್ನು ಪ್ರಸನ್ನಗೊಳಿಸುವುದರ ಜೊತೆಗೆ ಉತ್ತಮ ಆಲೋಚನೆಗಳು ಮೂಡುತ್ತವೆ.ಪೂಜೆ ಪುನಸ್ಕಾರಗಳಿಂದ ಸಮೃದ್ಧ ಜೀವನ ನಡೆಸಲು ಸಾಧ್ಯ ಎಂದರು.
ಪ್ರತಿಷ್ಠಾಪನಾ ಮಹೋತ್ಸವದ ಪೂಜಾ ಕಾರ್ಯಕ್ರಮಗಳನ್ನ ಆಗಮಿಕರಾದ ಕೆ.ಪದ್ಮನಾಭಶಾಸ್ತ್ರಿ,ಅರ್ಚಕ ರವಿಸ್ವಾಮಿ ನಡೆಸಿಕೊಟ್ಟರು. ಆಂದ್ರಜ್ಯೋತಿ ಪತ್ರಿಕೆಯ ಎಜಿಎಂ ಸುಧಾಕರ್,ಗ್ರಾಮದ ಮುಖಂಡರಾದ
ಸಂಜಯ್ರೆಡ್ಡಿ, ರಾಮಕೃಷ್ಣೇಗೌಡ, ಕಲ್ಯಾಣರೆಡ್ಡಿ, ರಾಮಸ್ವಾಮಿಶೆಟ್ಟಿ, ಹಾಗು ಗ್ರಾಮಸ್ಥರು ಭಾಗವಹಿಸಿದ್ದರು.
