ಕೋಲಾರ: ಬಡ,ಮಧ್ಯಮವರ್ಗದ ಜನತೆಗೆ ಗೃಹೋಪಕರಣಗಳನ್ನು ಬಡ್ಡಿರಹಿತ ಸುಲಭ ಕಂತುಗಳಲ್ಲಿ ಒದಗಿಸುವ ಡಿಸಿಸಿ ಬ್ಯಾಂಕ್ ನಿರ್ಧಾರ ಸಹಕಾರ ರಂಗದಲ್ಲೇ ಒಂದು ಕ್ರಾಂತಿಕಾರಿ ಹೆಜ್ಜೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು. ಭಾನುವಾರ ನಗರದ ರೈಲ್ವೆ ನಿಲ್ದಾಣದ ಮೈದಾನದಲ್ಲಿ ಡಿಸಿಸಿ ಬ್ಯಾಂಕ್, ಕೋಲಾರ ಕಸಬಾ ದಕ್ಷಿಣ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಗೃಹಬಳಕೆ ವಸ್ತುಗಳ ಪ್ರದರ್ಶನ ಉದ್ಘಾಟಿಸಿ, 102 ಮಹಿಳಾ ಸಂಘಗಳಿಗೆ 4.94 ಕೋಟಿ ರೂಗಳ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು. ಬಡ ಮಹಿಳೆಯರಿಗೆ ತಮ್ಮ ಮನೆಗೆ ಆಧುನಿಕ ಗೃಹೋಪಯೋಗಿ ಉಪಕರಣ ಕೊಂಡೊಯ್ಯುವ ಆಸೆ ಇದ್ದರೂ, ಆರ್ಥಿಕ ಪರಿಸ್ಥಿತಿ ಅಡ್ಡಿಯಾಗಿರುತ್ತದೆ, ಇಂತಹ ಸಂದರ್ಭದಲ್ಲಿ ಬಡ್ಡಿರಹಿತ ಸುಲಭ ಕಂತುಗಳಲ್ಲಿ ಪ್ರತಿಷ್ಟಿತ ಕಂಪನಿಗಳ ಟಿವಿ,ಫ್ರಿಡ್ಜ್,ಫ್ಯಾನ್,ವಾಷಿಂಗ್ ಮೆಷಿನ್ ಮತ್ತಿತರ ಉಪಕರಣಗಳನ್ನು ಪಡೆಯಲು ಅವಕಾಶ ಕಲ್ಪಿಸಿರುವುದು ಬ್ಯಾಲಹಳ್ಳಿ ಗೋವಿಂದಗೌಡರ ಜನಪರ ನಿರ್ಧಾರಕ್ಕೆ ಸಾಕ್ಷಿ ಎಂದರು.

ಮೀಟರ್ ಬಡ್ಡಿ ಹಾಕಿ ಸಾಲ ಕೊಟ್ಟವರನ್ನು ಜನತೆ ಎಂದಿಗೂ ಸ್ಮರಿಸುವುದಿಲ್ಲ, ಸತ್ತಾಗ ಹೆಣ ಹೊರುವವರೂ ಇರುವುದಿಲ್ಲ ಎಂಬುದನ್ನು ಉದಾಹರಣೆ ಸಹಿತ ತಿಳಿಸಿದ ಅವರು, ಡಿಸಿಸಿ ಬ್ಯಾಂಕಿನಿಂದ ತಾಯಂದಿರು,ರೈತರಿಗೆ ಬಡ್ಡಿವ್ಯವಹಾರದಿಂದ ಮುಕ್ತಿ ಸಿಕ್ಕಿದೆ ಎಂದರು. ಡಿಸಿಸಿ ಬ್ಯಾಂಕ್ ನಿಷ್ಕ್ರಿಯ ಆಸ್ತಿಯ ಮೌಲ್ಯ ಎನ್ಪಿಎ ಶೇ.3ಕ್ಕೆ ಇಳಿದು ರಾಜ್ಯಮಟ್ಟದಲ್ಲಿ ಗೌರವ ಗಳಿಸಿದೆ, ಮಹಿಳೆಯರು ನಂಬಿಕೆ ಉಳಿಸಿಕೊಂಡು ಸಾಲ ಮರುಪಾವತಿ ಮಾಡಿ, ಉಪಕರಣ ಕೊಂಡು ಉತ್ತಮ ಜೀವನ ನಡೆಸಿ ಎಂದರು.
ಹೊಲಿಗೆ ತರಬೇತಿ ಹೊಸ ಆವಿಷ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಗೃಹೋಪಯೋಗಿ ಉಪಕರಣಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಬಡ್ಡಿಯಿಲ್ಲದೇ ನೀಡುವ ದಿಟ್ಟ ನಿರ್ಧಾರ ಕೈಗೊಂಡಿರುವುದು ಸಹಕಾರ ರಂಗದಲ್ಲೇ ಹೊಸ ಆವಿಷ್ಕಾರ ಎಂದರು. ಗ್ರೀನ್ ವೇ ಸಂಸ್ಥೆ ಹಾಗೂ ಶ್ರೀರಾಮ ಬಳಕೆದಾರರ ಸಹಕಾರ ಸಂಘದ ಮೂಲಕ ಈ ಯೋಜನೆಯನ್ನು ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ ಮಹಿಳಾ ಸಂಘಗಳಿಗೂ ತಲುಪಿಸುವ ಕಾರ್ಯ ಮಾಡುತ್ತಿರುವುದಾಗಿ ತಿಳಿಸಿದರು. ಮಹಿಳೆಯರಿಗೆ ಅಗತ್ಯವಾದ ಉಪಕರಣಗಳ ಜತೆಗೆ ಹೊಲಿಗೆ ಯಂತ್ರವೂ ಕಂತಿನಲ್ಲಿ ಸಿಗಲಿದೆ, ಜತೆಗೆ ಬ್ಯಾಂಕ್ ವತಿಯಿಂದ ಹೊಲಿಗೆ ತರಬೇತಿ ನೀಡಿ ಸ್ವಾವಲಂಬಿ ಬದುಕಿಗೆ ದಾರಿ ತೋರುವ ಕೆಲಸ ಮಾಡಲು ನಿರ್ಧರಿಸಲಾಗಿದೆ ಎಂದರು.

ಶ್ರೀಮಂತರು ಮಾತ್ರವಲ್ಲ ಬಡವರಿಗೂ ಆಧುನಿಕ ಗೃಹೋಪಕರಣ ಬಳಸುವ ಆಸೆ ಇರುತ್ತದೆ, ಅಂತಹ ಆಸೆಯನ್ನು ಸುಲಭ ಕಂತುಗಳ ಸಾಲದ ರೂಪದಲ್ಲಿ ಬಡ್ಡಿಯಿಲ್ಲದೇ ಪೂರೈಸುವ ಕಾರ್ಯಕ್ಕೆ ಡಿಸಿಸಿ ಬ್ಯಾಂಕ್ ಸೊಸೈಟಿಗಳ ಮೂಲಕ ಚಾಲನೆ ನೀಡಿದೆ ಎಂದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಡಿಸಿಸಿ ಬ್ಯಾಂಕ್ ಕಸಬಾ ದಕ್ಷಿಣ ಸೊಸೈಟಿ ವತಿಯಿಂದ ಮಹಿಳೆಯರಿಗೆ 17 ಕೋಟಿ ರೂ ಹಾಗೂ ರೈತರಿಗೆ ಐದು ಕೋಟಿ ರೂ ಸಾಲ ಒದಗಿಸಿದೆ ಇದೀಗ ಗೃಹೋಪಯೋಗಿ ಉಪಕರಣಗಳನ್ನು ಇಲ್ಲೇ ಮೊದಲು ಒದಗಿಸಲಾಗಿದ್ದು, ತಾಯಂದಿರು ಸದುಪಯೋಗ ಪಡೆದಕೊಳ್ಳಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ರ್ದೇಶಕ ಎಂ.ಎಲ್.ಅನಿಲ್ಕುಮಾರ್, ದೇಶದಲ್ಲೇ ಮಹಿಳೆಯರಿಗೆ 1 ಸಾವಿರ ಕೋಟಿ ರೂ ಸಾಲ ಒದಗಿಸಿರುವ ಕೋಲಾರ ಡಿಸಿಸಿ ಬ್ಯಾಂಕ್ ಸಾಧನೆ ಐತಿಹಾಸಿಕ ದಾಖಲೆ ಎಂದು ತಿಳಿಸಿದರು. ಅದೇ ರೀತಿ ಗೃಹೋಪಕರಣಗಳನ್ನು ಬಡ್ಡಿರಹಿತ ಸುಲಭ ಕಂತುಗಳಲ್ಲಿ ಒದಗಿಸುವ ಕಾರ್ಯವೂ ರಾಜ್ಯದ ಸಹಕಾರಿ ರಂಗದಲ್ಲೇ ಇದೇ ಮೊದಲು ಎಂದು ತಿಳಿಸಿ,ಮಹಿಳೆಯರು ಇದರ ಸದುಪಯೋಗ ಪಡೆಯಬೇಕು ಎಂದರು. ಕಸಬಾ ಸೊಸೈಟಿಯಿಂದ 102 ಮಹಿಳಾ ಸಂಘಗಳಿಗೆ 4.94 ಕೋಟಿ ರೂ ನೀಡುತ್ತಿರುವ ಸಾಲ ಸದ್ವಿನಿಯೋಗವಾಗಲಿ, ಮಹಿಳೆಯರು ಸಮರ್ಪಕ ಮರುಪಾವತಿ ಮೂಲಕ ನಂಬಿಕೆ ಹೆಚ್ಚಿಸಿಕೊಳ್ಳಿ ಎಂದರು. ರಾಜ್ಯ ಭೂ ಅಭಿವೃದ್ದಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ, ಡಿಸಿಸಿ ಬ್ಯಾಂಕ್ ಮೂಲಕ ಸಾಲ ಪಡೆಯುವುದು ಮಾತ್ರವಲ್ಲ ನಿಮ್ಮ ಉಳಿತಾಯ ಹಣವನ್ನು ಇದೇ ಬ್ಯಾಂಕಿನಲ್ಲಿಟ್ಟು ಮತ್ತಷ್ಟು ಮಹಿಳಾ ಸಂಘಗಳಿಗೆ ಸಾಲ ಸಿಗಲು ಸಹಕಾರ ನೀಡಿ ಎಂದರು.\
ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್, ಭದ್ರತೆಯಿಲ್ಲದೇ ಸಾಲ ನೀಡುವ ದಿಟ್ಟ ನಿರ್ಧಾರ ಬ್ಯಾಂಕ್ ಕೈಗೊಂಡು ಕಾರ್ಯಗತಗೊಳಿಸಿದೆ, ತಾಯಂದಿರು ಅಷ್ಟೇ ನಂಬಿಕೆಯಿಂದ ಮರುಪಾವತಿ ಮಾಡಿ ಎಂದರು. ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರವಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಚೆಂಜಿಮಲೆ ರಮೇಶ್, ಕಸಬಾ ದಕ್ಷಿಣ ಎಸ್ಎಫ್ಸಿಎಸ್ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸ್, ಉಪಾಧ್ಯಕ್ಷ ಸೀನಪ್ಪ, ಸಿಇಒ ವೆಂಕಟೇಶ್, ನಿರ್ದೇಶಕರಾದ ನಾರಾಯಣಸ್ವಾಮಿ, ವೆಂಕಟೇಶಪ್ಪ, ಶ್ರೀರಾಮರೆಡ್ಡಿ,ಚಿಕ್ಕಹಸಾಳ ಸೀನಪ್ಪ, ಮುನಿವೆಂಕಟಪ್ಪ, ಪದ್ಮಾವತಿ,ಸರೋಜಮ್ಮ, ವೈ.ಶಿವಕುಮಾರ್,ಗ್ರೀನ್
ವೇ,ಶ್ರೀರಾಮಬಳಕೆದಾರರ ಸಹಕಾರ ಸಂಘದ ಪ್ರತಿನಿಧಿಗಳು ಹಾಜರಿದ್ದರು.
ಚಿತ್ರಶೀರ್ಷಿಕೆ;(ಫೋಟೊ-25ಕೋಲಾರ1):ಕೋಲಾರದ ರೈಲ್ವೆ ನಿಲ್ದಾಣದ ಮೈದಾನದಲ್ಲಿ ಡಿಸಿಸಿ ಬ್ಯಾಂಕ್, ಕೋಲಾರ ಕಸಬಾ ದಕ್ಷಿಣ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಮಹಿಳಾ ಸಂಘಗಳಿಗೆ 4.94 ಕೋಟಿ ರೂಗಳ ಸಾಲವನ್ನು ಶಾಸಕ ಕೆ.ಶ್ರೀನಿವಾಸಗೌಡ ವಿತರಿಸಿದರು. ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಧ್ಯಕ್ಷತೆ ವಹಿಸಿದ್ದರು.
