|
ಪೊಳಲಿ: ಇತಿಹಾಸಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ, ದುರ್ಗಾಪರಮೇಶ್ವರಿ ಮತ್ತು ಸಪರಿವಾರ ದೇವರುಗಳಿಗೆ ಮಾ.13ರ ಪ್ರಾತಃಕಾಲ 4ರಿಂದ ಮೀನ ಲಗ್ನ ಸಮುಹೂರ್ತದಲ್ಲಿ ಪುಣ್ಯಾಹ, ಗಣಹೋಮ ನಡೆಸಿ ಪೂರ್ವಾಹ್ನ 7.40ರಿಂದ 8.10ರ ಬ್ರಹ್ಮಕಲಶಾಭಿಷೇಕವು ವೈದಿಕ ವಿಧಿವಿಜ್ಞಾನದೊಂದಿಗೆ ಶಾಸ್ತ್ರೋಕ್ತವಾಗಿ ನಡೆಯಿತು. ಬ್ರಹ್ಮಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ತಂತ್ರಿ, ಬ್ರಹ್ಮಶ್ರೀ ವೇದಮೂರ್ತಿ ನರಸಿಂಹ ತಂತ್ರಿ, ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯರು ನೇತೃತ್ವದಲ್ಲಿ ನೆರವೇರಿಸಿದರು.
ಪೊಳಲಿಯ ಶ್ರೀರಾಜರಾಜೇಶ್ವರಿ ಹಾಗೂ ಪರಿವಾರ ದೇವರುಗಳು ಮೃಣ್ಮಮ ಮೂರ್ತಿಗಳಾಗಿವೆ. ಶ್ರೀರಾಜರಾಜೇಶ್ವರಿಯ ಮೃಣ್ಮಯ ಮೂರ್ತಿಯ ಎದುರು ಕಂಚಿನ ಅಭಿಮಾನಿ ಮೂರ್ತಿ ಇದ್ದು, ಮೃಣ್ಮಯ ಮೂರ್ತಿಯಿಂದ ಶಕ್ತಿ ಆಹಾವನೆ ನಡೆಸಿ ಕಂಚಿನ ಮೂರ್ತಿಗೆ ಶಕ್ತಿ ತುಂಬಲಾಗುತ್ತದೆ. ಬಳಿಕ ಶ್ರೀರಾಜರಾಜೇಶ್ಬರಿ ಮೃಣ್ಮಯ ಮೂರ್ತಿಯ ಎದುರಿರುವ ಕಂಚಿನ ಶ್ರೀರಾಜರಾಜೇಶ್ವರಿ ಅಭಿಮಾನಿ ಮೂರ್ತಿಗೆ ನಿರಂತರ ವಿವಿಧ ಬಗೆಯ ಕಲಶಾಭಿಷೇಕ ಶಾಸ್ತ್ರೋಕ್ತವಾಗಿ ಜರಗಿತು.
ಕುಂಕುಮಾಂಕಿತೆ….. ಶೋಭಿತೇ…
ಬ್ರಹ್ಮಕಲಶಾಭಿಷೇಕ ಪ್ರಕ್ರಿಯೆಗೊಳ್ಳುತ್ತಿದ್ದಂತೆ ಮಾತೆ ಶ್ರೀದೇವಿ ಸಾಕ್ಷಾತ್ ಮಧುಮಗಳಂತೆ ಶೋಭಿಸುವುದ ಕಂಡು ಭಕ್ತಜನರು ಬ್ರಹ್ಮ-ವಿಷ್ಣು- ಮಹೇಶ್ವರನಿಗೆ ಅಭಯದಾತೆಯಾಗಿ ಪ್ರಕಟೀಕರಣಗೊಂಡಾಗ ಹೇಗೆ ಕಾಣಿಸಿದಳೋ ಹಾಗೆಯೇ ಕಾಣಿಸಿದಳು ಎಂದು ಮಾತಾಡಿಕೊಳ್ಳುತ್ತಿದ್ದರು. ಸುರಥ ಮಹಾರಾಜ-ಸಮಾಧಿಗೆ ಪ್ರತ್ಯಕ್ಷಳಾದಾಗ ಇದೇ ರೀತಿ ಕಾಣಿಸಿರಬಹುದೆಂಬ ಭಾವನೆಯಿಂದ ಭಕ್ತಕುಲಕೋಟಿ ಉಘೇ ಉಘೇ ಎಂದು ಜಯಕಾರ ಹಾಕಿದರು.
ಶ್ರೀರಾಜರಾಜೇಶ್ವರಿಯನ್ನು ಕುಂಕುಮ ಬಣ್ಣದ ಪೀತಾಂಬರ ಸೀರೆಯಿಂದ, ವಜ್ರವೈಢೂರ್ಯ ಆಭರಣಗಳಿಂದ ಶೃಂಗರಿಸಲಾಗಿತ್ತು. ಶ್ರೀದೇವಿಯ ಈ ಪುಣ್ಯಕಾರ್ಯವನ್ನು ಕಣ್ತುಂಬಿಕೊಳ್ಳಲು ನಾಲ್ಕೂ ದಿಕ್ಕುಗಳಿಂದ ಭಕ್ತ ಜನರು ಸಾಗರೋಪಾದಿಯಲ್ಲಿ ದೇಗುಲದತ್ತ ಸಾಗಿಬಂದರು.
ಎಲ್ಇಡಿ ವ್ಯವಸ್ಥೆ:
ದೇವರ ಬ್ರಹ್ಮಕಲಶಾಭಿಷೇಕವನ್ನು ಸರ್ವಭಕ್ತರಿಗೂ ಕಣ್ತುಂಬಿಕೊಳ್ಳಲು ದೇವಸ್ಥಾನದ ಆಸುಪಾಸುಗಳಲ್ಲಿ ಏಳೆಂಟು ಎಲ್ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದೆ. ದೃಶ್ಯ ಮಾಧ್ಯಮಗಳು, ವೆಬ್ಸೈಟ್ ಹೀಗೆ ಸುದ್ಧಿಮಾಧ್ಯಮಗಳು ಪ್ರಚಾರಕಾರ್ಯದಲ್ಲಿ ನಿರತವಾಗಿವೆ. ಪರಿಣಾಮ ಶ್ರೀಕ್ಷೇತ್ರ ಪೊಳಲಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವವನ್ನು ಲಕ್ಷೋಪಲಕ್ಷ ಭಕ್ತ ಜನರು ತಮ್ಮ ಮನೆಗಳಲ್ಲೇ ಕುಳಿತು ನೋಡುವಂತಾಗಿದೆ.
`ಬ್ರಹ್ಮ’ ಎಂದರೆ ಪರಿಪೂರ್ಣ: -ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯರು- ತಂತ್ರಿಗಳು ಪೊಳಲಿ
“ಬ್ರಹ್ಮ’ ಎಂದರೆ ಶಾಸ್ತ್ರದಲ್ಲಿ ಪರಿಪೂರ್ಣ ಎಂದರ್ಥ. ಬ್ರಹ್ಮಕಲಶದಲ್ಲಿ ಎಲ್ಲ ದೇವರನ್ನು ಏಕಸ್ವರೂಪದ ಆವಾಹನೆ ಮಾಡುತ್ತೇವೆ. ಇಂಥಾ ಬ್ರಹ್ಮಕಲಶ, ನಿತ್ಯಪೂಜೆ, ವಿಶೇಷ ಪೂಜೆ ಎಲ್ಲಿ ಮಾಡುತ್ತೇವೆಯೋ ಅಲ್ಲಿ ಸಾನಿಧ್ಯ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಮೂರ್ತಿಯಲ್ಲಿ ಸಾನಿಧ್ಯ ಬರಬೇಕಿದ್ದರೆ ಇಂಥಾ ಪೂಜಾಕ್ರಮಗಳು ವಿಧಿವತ್ತಾಗಿ ನಡೆಯಬೇಕು. ಆವಾಗಲೇ ಆ ದೇವರು ಭಕ್ತರ ಬೇಡಿಕೆಗಳಿಗೆ ಕೃತಾರ್ಥರಾಗುತ್ತಾರೆ.’
|










